ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಿಂದ ಬೆಳೆಹಾನಿಯಾಗಿರುವುದು ನವಲಗುಂದ ತಾಲೂಕಿನಲ್ಲಿ.
ಆದರೆ ಕೇಂದ್ರಅಧ್ಯಯನ ತಂಡ ಅತ್ತ ಕಡೆ ಮುಖ ಮಾಡದೆ ಕಡಗಣೆನೆ ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮಂಗಳವಾರ ಮಧ್ಯಾಹ್ನ ಧಾರವಾಡ ತಾಲೂಕಿನ ಹಾರೂಬೆಳವಡಿಯಲ್ಲಿ ಕೇಂದ್ರಅಧ್ಯಯನ ತಂಡವನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಧಾರವಾಡ ಜಿಲ್ಲಾಡಳಿತ, ಜಿಲ್ಲೆಯ ಜನಪ್ರತಿನಿಧೀಗಳು ಈ ಬಗ್ಗೆ ಪೂರ್ವವಾಗಿಯೇ ಸಿದ್ದತೆ ಸಭೆ ನಡೆಸಿ, ಅತಿ ಹೆಚ್ಚು ಹಾನಿಗೀಡಾದ ಪ್ರದೇಶಗಳಿಗೆ ಅವರನ್ನು ಕರೆದುಕೊಂಡು ಹೋಗಬೇಕಾಗಿತ್ತು.
ಆದರೆ ಜಿಲ್ಲಾಡಳಿತ ಈ ವಿಷಯದಲ್ಲಿ ಯಡವಿದೆ. ಕೇಂದ್ರಅಧ್ಯಯನ ತಂಡ ಕೂಡ ನಿಗದಿತ ವೇಳಾಪಟ್ಟಿಯಂತೆ ಪ್ರವಾಸ ಮಾಡಿದರೆ ಹೇಗೆ.
ಸ್ವಲ್ಪ ಹೆಚ್ಚಿನ ಸಮಯ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀಡಬೇಕಾಗಿತ್ತು. ಇಲ್ಲದಿದ್ದರೆ ಇದು ಕಾಟಾಚಾರದ ಭೇಟಿಯಾದಂತಾಗಲಿದೆ ಎಂದು ಕಿಡಿಕಾರಿದರು. |
ಹಣಸಿ, ಶಿರಕೋಳ ಸೇರಿದಂತೆ ಧಾರವಾಡ ಜಿಲ್ಲೆಯ ಹಲವು ಹಳ್ಳಿಗಳಿಗೆ ಅಪಾರ ಪ್ರಮಾಣದ ಬೇಳೆಗಳು ಕೊಚ್ಚಿ ಹೋಗಿವೆ. ಅದನ್ನು ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದ ಕೈ ಬಿಟ್ಟಂತಾಗಿದೆ.
ನವಲಗುಂದ ತಾಲೂಕಿನ ಅನೇಕ ಹಳ್ಳಿಗಳ ಸಾವಿರಾರು ಎಕರೆ ಬೆಳೆ ಹಾನಿಗೀಡಾಗಿದೆ. ಜಿಲ್ಲೆಯಲ್ಲಿ ಅನೇಕ ಮನೆಗಳು ಧರೆಗೆ ಉರುಳಿವೆ.
ಅದರಲ್ಲೂ ಕಳೆದ ಬಾರಿಯ ಬೆಳೆ ಹಾನಿಯೇ ಬಂದಿಲ್ಲ. ಮನೆ ನಿರ್ಮಾಣದ ಕಂತುಗಳು ಸಹ ನೆನೆಗುದಿವೆ ಬಿದ್ದಿವೆ. ಅನೇಕರು ಇನ್ನು ಶೆಡ್ ಗಳಲ್ಲಿಯೇ ವಾಸವಾಗಿದ್ದಾರೆ.
ಆದರೂ ಅವರ ಬದುಕಿನೊಂದಿಗೆ ಚೆಲ್ಲಾಟವಾಡಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ಸರಿ. ಇದರ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ.
ಇದರ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಎಚ್ಚರಿಸಿದ್ದಾರೆ.
ಕೇಂದ್ರ ಅಧ್ಯಯನ ತಂಡದವರು ಕೂಡ ಸೇತುವೆ ಕುಸಿತ, ರಸ್ತೆ ಕಾಮಗಾರಿ, ದುರಸ್ತಿಗೆ ಹೆಚ್ಚಿನ ಒತ್ತು ನೀಡಿದಂತೆ ಕಂಡು ಬಂತು.
ಆದರೆ ರೈತರ ಜಮೀನಿನಲ್ಲಿ ಕೊಚ್ಚಿ ಹೊಗಿರುವ ಮಣ್ಣಿನ ಮಟ್ಟ, ಬೆಳೆಹಾನಿ, ರೈತರ ಸಂಕಷ್ಟ,ಅವರ ದುಃಖ ದುಮ್ಮಾನಗಳತ್ತ ಹೆಚ್ಚು ಮುತುವರ್ಜಿ ಕಾಣಲಿಲ್ಲ ಎಂದು ನೀರಲಕೇರಿ ಖೇದ ವ್ಯಕ್ತಪಡಿಸಿದ್ದಾರೆ.