ಅಂತಾರಾಷ್ಟ್ರೀಯ

ಧಾರವಾಡ-ಬೆಂಗಳೂರು “ವಂದೇ ಭಾರತ ರೈಲು” ಸಂಚಾರಕ್ಕೆ ಕ್ರಮ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ

ಧಾರವಾಡ prajakiran.com ಅ.11 : ಅತಿ ವೇಗದ ವಿದ್ಯುತ್‍ಚಾಲಿತ ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ಸಂಚಾರವನ್ನು ಫೆಬ್ರವರಿ ನಂತರ ಅನುಷ್ಠಾನಗೊಳಿಸುವುದೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ತಿಳಿಸಿದರು.

ಇಂದು ಅವರು 20 ಕೋಟಿ ರೂ.ವೆಚ್ಚದಲ್ಲಿ ಪುನರಾಭಿವೃದ್ಧಿಗೊಂಡ ಧಾರವಾಡದ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಧಾರವಾಡದ ರೈಲು ವಿದ್ಯುದ್ಧಿಕರಣ ಶೇ.70 ರಷ್ಟು ಪೂರ್ಣಗೊಂಡಿದ್ದು ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ.

ನಂತರ ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಪೋವನ ಹತ್ತಿರ ಎಲ್‍ಸಿ300 ಮೇಲ್ಸೆತುವೆಗೆ ತಕ್ಷಣವೇ ವಾಟ್ಸ್‍ಅಪ್‍ನಲ್ಲಿ ಹಿರಿಯ ಅಧಿಕಾರಿಗಳಿಂದ ದೊರೆತ ಅನುಮೋದನೆಯನ್ನು ಸ್ಳಳದಲ್ಲೇ ಓದಿ ಹೇಳಿದರು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವು ಈ ಭಾಗದ ಆರ್ಥಿಕತೆಯ ಬೆಳವಣಿಗೆಗೆ ಅತೀ ಮಹತ್ವದಾಗಿದ್ದು, ಕೆಲ ಪರಿಸರವಾದಿಗಳು ಇದನ್ನು ವಿರೋಧಿಸಿರುವುದರಿಂದ ಹೈಕೋರ್ಟ್‍ನಲ್ಲಿ ಪ್ರಕರಣ ಬಾಕಿ ಇದೆ.

ಪಶ್ಚಿಮ ಘಟ್ಟಗಳ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಯೋಜನೆಯನ್ನು ಕೈಗೊಳ್ಳಲು ತಾವು ಸಿದ್ದರಿದ್ದು, ಸ್ಥಳೀಯ ಪರಿಸರವಾದಿಗಳ ಮನ ಓಲೈಸುವಂತೆ ತಿಳಿಸಿದರು.

ಹುಬ್ಬಳ್ಳಿ-ನಿಜಾಮುದ್ದಿನ್ ರೈಲನ್ನು ಪಂಡಿತ ಸವಾಯಿ ಗಂಧರ್ವ ಎಂದು ಮರುನಾಮಕರಣ ಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಅಶ್ವಿನಿ ವೈಷ್ಣವ ತಿಳಿಸಿದರು.

ವಾರಣಾಸಿಗೆ ವಾರಕ್ಕೆ ಎರಡು ದಿನ ರೈಲು ಸಂಚಾರ ನಿಗದಿಗೊಳಿಸುವ ಬಗ್ಗೆ ವಾರಣಾಸಿಯಲ್ಲಿ ರೇಲ್ವೆ ಸಂಚಾರದ ಸಮಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಎಲ್ಲ ಬೇಡಿಕೆಗಳನ್ನು ರೇಲ್ವೆ ಸಚಿವರ ಗಮನಕ್ಕೆ ತಂದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಕಾರ್ಯಕ್ಷಮತೆಯನ್ನು ಕೊಂಡಾಡಿದ ಸಚಿವ ಅಶ್ವಿನಿ ವೈಷ್ಣವ ಅವರು ಜೋಶಿ ಅವರು ನನ್ನ ಗುರುಗಳು ಎಂದು ಸಂಭೋದಿಸಿದರಲ್ಲದೇ ಪಾರ್ಲಿಮೆಂಟ್‍ನಲ್ಲಿ ಯಾವ ರೀತಿ ಪ್ರಶ್ನೋತ್ತರಕ್ಕೆ ಅಣಿಯಾಗಬೇಕೆಂಬುದನ್ನು ಮಾರ್ಗದರ್ಶನ ನೀಡುತ್ತಿರುತ್ತಾರೆ ಎಂದರು.

ಸಚಿವ ಪ್ರಲ್ಹಾದ ಜೋಶಿ ಅವರು ಮೋದಿ ಅವರ ನಿಕಟ ಹಾಗೂ ಪ್ರಭಾವಿ ಮಂತ್ರಿಯಲ್ಲೊಬ್ಬರಾಗಿದ್ದಾರೆಂದರು. ಈ ಭಾಗದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಶ್ಲಾಘಿಸಿದರು.

ಮೋದಿಯವರಿಂದಾಗಿ ಈ ದೇಶದ ಸಮಗ್ರ ಅಭಿವೃದ್ಧಿಯ ಚಿತ್ರಣ ಬದಲಾಗಿದ್ದು ಮುಂಬರುವ ಪೀಳಿಗೆ ಮೋದಿಯವರ ನೇತೃತ್ವದಲ್ಲಿ ಬೃಹತ್ ಭಾರತವನ್ನು ಕಾಣಲಿದ್ದಾರೆ ಎಂದು ನುಡಿದರು.

ಕೇಂದ್ರ ಗಣಿ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಸಚಿವ ಅಶ್ವಿನಿ ವೈಷ್ಣವ ಅವರು ಐಎಎಸ್ ಅಧಿಕಾರಿಯಾಗಿ, ಉದ್ಯಮಿಯಾಗಿ, ವಾಜಪೇಯಿ ಅವರ ಆಪ್ತ ಕಾರ್ಯದರ್ಶಿಯಾಗಿ ಈಗ ಮೋದಿಯವರ ನೇತೃತ್ವದಲ್ಲಿ ರೇಲ್ವೆ ಹಾಗೂ ತಂತ್ರಜ್ಞಾನ ಸಚಿವರಾಗಿದ್ದು ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.

ರೇಲ್ವೆಯಲ್ಲಿ ಹೊಸ ಹೊಸ ಆಧುನಿಕ ತಂತ್ರಜ್ಞಾನವನ್ನು ಸಚಿವರು ತರುತ್ತಿದ್ದಾರೆ ಎಂದರು. ರೇಲ್ವೆ ಪ್ರಯಾಣಿಕರಿಗೆ ಒಟ್ಟು 62 ಸಾವಿರ ಕೋಟಿ ಸಬ್ಸಿಡಿ ನೀಡಲಾಗಿದೆ. ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಕವಚ ಎಂಬ ವಿಶ್ವದರ್ಜೆ ರೇಲ್ವೆ ಸುರಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

2014-2022 ರ ಅಭಿವೃದ್ಧಿಯಲ್ಲಿ 30.446 ಕಿ.ಮೀ ವಿದ್ಯುದ್ಧಿಕರಣ ಮಾಡಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ ಮಾತನಾಡಿ, ವಿದ್ಯಾಕಾಶಿ ಧಾರವಾಡಕ್ಕೆ ಇಂದಿನ ರೈಲು ಪುನರಾಭಿವೃದ್ಧಿ ಲೋಕಾರ್ಪಣೆಯು ಕಿರೀಟ ಪ್ರಾಯವಾಗಿದೆ.

ಶಾಸಕ ಅರವಿಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ಈವರೆಗೆ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಿಸಿದರು. ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವಣಪ್ಪ ಅಷ್ಟಗಿ, ಜಂಗಲ್ ರೆಸಾರ್ಟ್ ಅಧ್ಯಕ್ಷರಾದ ರಾಜಶೇಖರ ಕೋಟೆಣ್ಣವರ, ಸೌತ್-ವೆಸ್ಟರ್ನ್ ರೇಲ್ವೆ ಜನರಲ್ ಮ್ಯಾನೇಜರ್ ಸಂಜಯ ಕಿಶೋರ ವೇದಿಯಲ್ಲಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *