https://www.facebook.com/prajakirannews | : |
ಧಾರವಾಡ prajakiran.com : ಡ್ರಗ್ ಜಾಲದ ಕುರಿತು ಇಡೀ ರಾಜ್ಯಾದ್ಯಂತ ತನಿಖೆ ಆಗಬೇಕು. ಅಲ್ಲದೆ, ಪ್ರಕರಣ ತನಿಖೆ ಫಾಸ್ಟ್ ಆಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಗ್ರಹಿಸಿದರು.
ಅವರು ಶನಿವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಪ್ರತಿಕ್ರಿಯೆ ನೀಡಿದರು.
ತನಿಖೆ ಬೇಗ ಬೇಗ ಮಾಡಬೇಕಿತ್ತು. ಆದರೆ, ಕೆಲವು ಕಡೆ ಒಳ್ಳೆಯ ರೀತಿಯಿಂದ ತನಿಖೆ ನಡೆದಿದೆ. ಇನ್ನೂ ತಡವಾಗಿಲ್ಲ. ಆದರೂ ಎಲ್ಲರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದರು.
ಇದೇ ವೇಳೆ ಎಐಸಿಸಿ ಕಾರ್ಯಕಾರಿ ಸಮಿತಿ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ ಅವರು, ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುವ ಹೊಸಬರ ಅವಶ್ಯಕತೆ ಇದೆ ಎಂದರು.
ಈಗಾಗಲೇ ಬಹಳ ಸೇವೆ ಮಾಡಿದ ಹಳಬರು ಇದ್ದರು. ಸುಮಾರು ಐವತ್ತು ಅರವತ್ತು ವರ್ಷದಿಂದ ಇದ್ದವರಿದ್ದರು. ಆದರೂ ಅವರನ್ನೆಲ್ಲ ಕೈ ಬಿಟ್ಟಿಲ್ಲ ಎಂದರು.
ಬೇರೆ ಬೇರೆ ಪೋಸ್ಟ್ ಗಳು, ಕಮೀಟಿಗಳಿವೆ. ಅವರನ್ನು ಉಪಯೋಗ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದ ಸರಕಾರಿ ಕಚೇರಿಗಳ ಸ್ಥಳಾಂತ ವಿಚಾರಕ್ಕೆ ಸಂಬಂಧಿಸಿದಂತೆ ಅದನ್ನು ಆಡಳಿತದಲ್ಲಿರುವವರಿಗೆ ಕೇಳಬೇಕು. ಇದಕ್ಕೆಲ್ಲ ಅವರೇ ಉತ್ತರಿಸಬೇಕು ಎಂದು ರಾಜ್ಯದ ಬಿಜೆಪಿ ಸರಕಾರದ ವಿರುದ್ದ ಕಿಡಿಕಾರಿದರು.
ಇದೇ ವೇಳೆ ಕರ್ನಾಟಕ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪಟ್ಯಾಪ್ ಹಾಗೂ ಶಿಷ್ಯವೇತನಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿ ಬೆಂಬಲ ಸೂಚಿಸಿದರು.