ಧಾರವಾಡ prajakiran.com : ಧಾರವಾಡ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಯೊಬ್ಬ ಗಾಜಿನ ಚೂರು ನುಂಗಿ ಅಸ್ವಸ್ತಗೊಂಡ ಘಟನೆ ಶುಕ್ರವಾರ ನಡೆದಿದೆ.
ತುಮಕೂರಿನಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಚಂದ್ರಶೇಖರ ಎಂಬಾತನೇ ಗಾಜು ನುಂಗಿದ ಕೈದಿಯಾಗಿದ್ದಾನೆ.
ತೀವ್ರ ಅಸ್ವಸ್ತಗೊಂಡ ಈತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾನಸಿಕ ಅಸ್ವಸ್ಥನಾಗಿದ್ದ ಚಂದ್ರಶೇಖನಿಗೆ ಧಾರವಾಡ ಡಿಮಾನ್ಸ್ ನಲ್ಲಿ ಚಿಕಿತ್ಸೆ ಕೊಡಸಲಾಗುತ್ತಿತ್ತು.
ಅದರಂತೆ ಶುಕ್ರವಾರ ಆರೋಪಿಯನ್ನು ಡಿಮಾನ್ಸ್ ಗೆ ಕರೆದುಕೊಂಡು ಬಂದಾಗ ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿದ ಕೈದಿ ಗಾಜಿನ ಚೂರು ನುಂಗಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜೈಲು ಅಧೀಕ್ಷಕ ಎಂ.ಎ. ಮರಿಗೌಡರ, ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿರುವ ಚಂದ್ರಶೇಖರ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದು ನಿಜ.
ಆತನನ್ನು ಡಿಮ್ಹಾನ್ಸ್ ಗೆ ಕರೆದುಕೊಂಡು ಹೋದಾಗ ಈ ಘಟನೆ ನಡೆದಿದೆ. ಆತ ಗಾಜಿನ ಚೂರು ನುಂಗಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ತಪಾಸಣಾ ವರದಿ ನಂತರ ಸತ್ಯಾಸತ್ಯತೆ ಬಹಿರಂಗಗೊಳ್ಳಲಿದೆ.
ಒಂದು ವೇಳೆ ಆತ ಗಾಜು ನುಂಗಿರುವುದು ನಿಜವಾದಲ್ಲಿ ಅದಕ್ಕೆ ಕಾರಣ ಏನು ಎಂಬುದನ್ನು ಪತ್ತೆಹಚ್ಚಲಾಗುವುದು ಎಂದು ಹೇಳಿದರು.