ಬೆಂಗಳೂರು prajakiran.com : ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರವಾಹದ ಪ್ರತಾಪಕ್ಕೆ ಸೋಮವಾರ ಐದು ಜನ ಬಲಿಯಾಗಿದ್ದಾರೆ. ಹಲವು ಜಿಲ್ಲೆಗಳು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿವೆ.
ರಾಯಚೂರು ಜಿಲ್ಲೆಯಲ್ಲಿ ತೆಪ್ಪ ಮಗುಚಿನಾಲ್ವರು ಕೃಷ್ಣಾ ನದಿಯ ಪ್ರವಾಹಕ್ಕೆ ಕೊಚ್ಚಿ ಹೊಗಿದ್ದಾರೆ. ನಡುಗಡ್ಡೆಯಲ್ಲಿರುವ ಪೆದ್ದಕುರುಮ ಗ್ರಾಮಕ್ಕೆ ತೆಪ್ಪದಲ್ಲಿ ತೆರಳುತ್ತಿದ್ದಾಗ ಏಕಾಎಕಿ ಪ್ರವಾಹ ಬಂದ ಪರಿಣಾಮ ತೆಪ್ಪದೊಳಗೆ ನೀರು ನುಗ್ಗಿದೆ.
ಒಟ್ಟು 13 ಜನರಿದ್ದ ತೆಪ್ಪದಲ್ಲಿ ನಾಲ್ವರು ನೀರು ಪಾಲಾಗಿದ್ದರೆ, 9 ಜನರನ್ನು ರಕ್ಷಿಸಲಾಗಿದೆ. ಈ ಮಧ್ಯೆ ರಾಯಚೂರು ಜಿಲ್ಲೆಯ ರಾಮದುರ್ಗದಲ್ಲಿ ಮನೆಯೊಂದು ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
9 ಜಿಲ್ಲೆಗಳಲ್ಲಿ ಆತಂಕ :
ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ,ಹಾವೇರಿ, ವಿಜಯಪುರ, ಬಾಗಲಕೋಟೆ,ಯಾದಿಗಿರಿ ಜಿಲ್ಲೆಯ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ವೇದಗಂಗಾ, ದೂದ್ ಗಂಗಾ, ಹಿರಣ್ಯಕೇಶಿ, ತುಂಗಭದ್ರಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.
ಇದರಿಂದಾಗಿ ರಾಜ್ಯದ ಬಹುತೇಕ ನದಿಗಳು, ಅವುಗಳ ಉಪನದಿಗಳು ತುಂಬಿ ಹರಿಯುತ್ತಿವೆ. ಬೆಣ್ಣೆಹಳ್ಳ, ತುಪರಿಹಳ್ಳಿ ಸೇರಿದಂತೆ ಹಳ್ಳ, ಕೊಳ್ಳಗಳು ಮೈ ದುಂಬಿ ಹರಿಯುತ್ತಿರುವುದರಿದ ರಾಜ್ಯದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಜೊತೆಗೆ ವರುಣನ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.