ಧಾರವಾಡ prajakiran.com : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಹೋರಾಟ ನಿರ್ಲಕ್ಷಿಸಿರುವ ಸರಕಾರದ ಧೋರಣೆ ಖಂಡಿಸಿ ಏ. 13 ರಂದು ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘದ ಗೌರವಾಧ್ಯಕ್ಷ ಪಿ.ಎಚ್.ನೀರಲಕೇರಿ ಹೇಳಿದ್ದಾರೆ.
ಕಳೆದ ಏಳು ದಿನಗಳಿಂದ ಕಾರ್ಮಿಕರು ತಮ್ನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾರ್ಮಿಕರ ಜೊತೆ ಅವರ ಕುಟುಂಬದವರು ಕೂಡ ಮನೆಯಿಂದ ಹೊರಗೆ ಬಂದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಇತ್ತ ಸರಕಾರ ನೌಕರರ ವರ್ಗಾವಣೆ, ವಜಾಗೊಳಿಸುವುದು ಸೇರಿದಂತೆ ಕಾರ್ಮಿಕ ವಿರೋಧಿ ಕ್ರಮಗಳನ್ನು ಕೈಕೊಳ್ಳುತ್ತಿದೆ.
ಇದಲ್ಲದೇ ಕಾರ್ಮಿಕರನ್ನು ಬೆದರಿಸಿ ಕರ್ತವ್ಯಕ್ಕೆ ನಿಯೋಜನೆ ಮಾಡುತ್ತಿದ್ದಾರೆ. ಇದಿಷ್ಟು ಸಾಲದೆಂಬಂತೆ ಕಾರ್ಮಿಕರ ಒಗ್ಗಟ್ಟು ಮುರಿಯುವ ಕುತಂತ್ರ ಮಾಡುತ್ತಿದೆ.
ಒಂದು ಕಡೆ ಕಾರ್ಮಿಕರ ಹಿತರಕ್ಷಣೆಯ ಜವಾಬ್ದಾರಿ ನಿರ್ವಹಿಸದ ಸರಕಾರ, ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ಅಲಕ್ಷಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಮಿಕರ ಹೋರಾಟವನ್ನು ಗೌರವಿಸಬೇಕಿದ್ದ ಸರಕಾರ, ತನ್ನ ಹಠಮಾರಿ ಧೋರಣೆ ಬಿಡುತ್ತಿಲ್ಲ.
ಸರಕಾರದ ಕಾರ್ಮಿಕ ಮತ್ತು ಜನವಿರೋಧಿ ನೀತಿಯನ್ನು ಖಂಡಿಸಿ ಹೋರಾಟವನ್ನು ತೀವ್ರಗೊಳಿಸಲು ತಿರ್ಮಾನಿಸಲಾಗಿದೆ.
ಈ ಹೋರಾಟದ ಭಾಗವಾಗಿ ನಾಳೆ.ಏ. 13 ರಂದು ಬೆಳಗ್ಗೆ 10.30. ರಿಂದ ಜಿಲ್ಲಾಧಿಕಾರಿ ಕಚೇರಿಯಿಂದ ನಗರದಲ್ಲಿನ ಕೇಂದ್ರ ಕಾರಾಗೃಹಕ್ಕೆ ತೆರಳಲಾಗುವುದು.
ಈ ಸಂದರ್ಭದಲ್ಲಿ ಕಾರ್ಮಿಕರ ಜೊತೆ ಅವರ ಕುಟುಂಬದವರು ಕೂಡ ಪಾಲ್ಗೊಳ್ಳಲಿದ್ದಾರೆ.
ಹೋರಾಟದಲ್ಲಿ ಭಾಗವಹಿಸುವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಸ್ಯಾನಿಟೈಸರ್ ಬಳಕೆ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ನೀರಲಕೇರಿ ಮನವಿ ಮಾಡಿದ್ದಾರೆ.