ಬೆಂಗಳೂರು prajakiran.com : ರಾಜ್ಯದಲ್ಲಿ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ನಿಯಂತ್ರಣ ಬಾರದಿರುವುದನ್ನು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.
ಗುರುವಾರ ಸಚಿವ ಸಂಪುಟ ಸಭೆಗೆ ತೆರಳುವ ಮುನ್ನ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಕೆಲ ಜಿಲ್ಲೆಗಳು ಕೈ ತಪ್ಪಿ ಹೋಗುತ್ತಿವೆ ಎಂದರು.
ಈ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸರು ಅದರ ನಿಯಂತ್ರಣಕ್ಕಾಗಿ ಹಗಲುರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಅದು ಕಷ್ಟಸಾಧ್ಯವಾಗುತ್ತಿದೆ ಎಂದರು.
ಈ ಬಗ್ಗೆ ಇನ್ನೊಮ್ಮೆ ಅವರ ಸಭೆ ನಡೆಸಿ ಸಂಪೂರ್ಣ ಚಿತ್ರ ಪಡೆದು ಮತ್ತೋಮ್ಮೆ ವಿವರಿಸುತ್ತೇನೆ ಎಂದು ಹೇಳಿದರು.
ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ರಾಜ್ಯ ಸರಕಾರ ಕೋವಿಡ್ ನಿಯಂತ್ರಣಕ್ಕೆ ತಾಲೂಕು , ಜಿಲ್ಲಾಸ್ಪತ್ರೆಗಳಲ್ಲಿ ಬೆಡ್ ಹೆಚ್ಚಳಕ್ಕೆ ಹಾಗೂ ಗಂಟಲು ದ್ರವ ತಪಾಸಣೆ ವೇಗ ಹೆಚ್ಚಳ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.
ಅಲ್ಲದೆ, ರಾಜ್ಯದ ರಾಜಧಾನಿ ಬೆಂಗಳೂರು ನಗರವನ್ನು ಗಂಭೀರವಾಗಿ ಪರಿಗಣಿಸಿ ಪ್ರತ್ಯೇಕವಾಗಿ ಸಭೆ ನಡೆಸಿ ನಿಯಂತ್ರಣ ಸಾಧಿಸಲು ನಿರ್ಧರಿಸಿದ್ದಾರೆ.
ಕರೋನಾ ಡೀಪ್ ಆಗಿ ಹೋಗುವುದನ್ನು ತಡೆಗಟ್ಟಲು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ, ಆರೋಗ್ಯ ಸಚಿವ ಶ್ರೀರಾಮುಲು, ಕಂದಾಯ ಸಚಿವ ಆರ್, ಅಶೋಕ್, ಸಚಿವರಾದ ವಿ. ಸೋಮಣ್ಣ, ಎಸ್. ಟಿ. ಸೋಮಶೇಖರ, ಬೈರತಿ ಬಸವರಾಜ, ಗೋಪಾಲಯ್ಯ, ಸುರೇಶ ಕುಮಾರ್ ಅವರಿಗೆ ಬೆಂಗಳೂರು ವಲಯವಾರು ಹೊಣೆ ನೀಡಲು ನಿರ್ಧರಿಸಲಾಗಿದೆ.
ಅಲ್ಲದೆ, ಬೆಂಗಳೂರು ನಗರ ವಲಯವಾರು ವಿಂಗಡಿಸಿ, 8 ಸಚಿವರ ಹೊಣೆ ಜೊತೆಗೆ ಅವರಿಗೆ ಸಹಾಯಕರಾಗಿ ಮಹಾನಗರ ಪಾಲಿಕೆ ಸದಸ್ಯರಿಗೆ ವಾರ್ಡ್ ಉಸ್ತುವಾರಿ ನೀಡಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆ ಮೂಲಕ ಬೆಂಗಳೂರು ನಗರದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಎಲ್ಲಾ ರೀತಿಯಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿರ್ಧಾರಕ್ಕೆ ಸರಕಾರ ಬಂದಿದೆ ಎಂದು ಹೇಳಲಾಗುತ್ತಿದೆ.