ಧಾರವಾಡ prajakiran.com : ಧಾರವಾಡ ವಿಭಾಗದ ಅರಣ್ಯ ಇಲಾಖೆಯ ಹುಣಸಿಕುಮರಿ ಗ್ರಾಮ ರಸ್ತೆಯಲ್ಲಿ ಬರುವ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮರದ ದಿಮ್ಮೆಗಳನ್ನು ಕಡಿದಿದ್ದಾರೆ.
ಅಲ್ಲದೆ, ಅಕ್ರಮವಾಗಿ ಸಾಗಾಣಿಕೆ ಮಾಡುವಾಗ ಅರಣ್ಯ ಸಿಬ್ಬಂದಿ ತಪಾಸಣೆ ಮಾಡಿ ವಾಹನ ಸಮೇತ ಸಾಗವಾನಿ ಮರ ವಶಪಡಿಸಿಕೊಂಡು ಧಾರವಾಡ ವಲಯ ಅರಣ್ಯ ಅಧಿಕಾರಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ವಲಯ ಅರಣ್ಯ ಅಧಿಕಾರಿಗಳ ನ್ಯಾಯಾಲಯವು ವಾಹನ ಮಾಲೀಕರಾದ ಕವಲಗೇರಿ ಗ್ರಾಮದ ಮಂಜುನಾಥ ಶಂಕ್ರಪ್ಪ ವಕ್ಕೂಂದ ಅವರಿಗೆ ನೊಟೀಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗಲು ಆದೇಶಿಸಿತ್ತು.
ವಾಹನ ಮಾಲೀಕರು ತಮ್ಮ ಯಾವುದೇ ಅಹವಾಲನ್ನು ಸಲ್ಲಿಸದಿರುವುದರಿಂದ ಜೂನ್ ೨೫, ೨೦೨೦ ರಂದು ಧಾರವಾಡ ವಿಭಾಗದ ಪ್ರಾಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಯಶಪಾಲ್ ಕ್ಷೀರಸಾಗರ ಅವರು ಸಾಗವಾನಿ, ಬೊಲೆರೋ ಮುಟ್ಟುಗೋಲು ಹಾಕಲು ಆದೇಶ ಹೊರಡಿಸಿದ್ದಾರೆ.
ಅಕ್ರಮವಾಗಿ ಅರಣ್ಯ ಉತ್ಪನ್ನ ಸಾಗಾಣಿಕೆ ಮಾಡುತ್ತಿದ್ದ ಬೊಲೇರೋ ಪಿಕಪ್ ವಾಹನ ಹಾಗೂ ಸಾಗವಾನಿ ಕಟ್ಟಿಗೆಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿ, ವಶಪಡಿಸಿಕೊಂಡಿದ್ದಾರೆ.