ದಾವಣಗೆರೆ Prajakiran.com : ಜಗಳೂರು ವಕೀಲರ ಮೇಲೆ ಹಲ್ಲೆ ಮಾಡಿದ್ದ 3 ಜನ ಆರೋಪಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಮಹತ್ತರ ಆದೇಶ ಹೊರಡಿಸಿದೆ.
ದಾವಣಗೆರೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ಗೀತಾ ಕೆ.ಬಿ ಅವರು ಈ ತೀರ್ಪು ನೀಡಿದ್ದಾರೆ.
ಮೂವರು ಆರೋಪಿಗಳಿಗೆ ತಲಾ 48 ಸಾವಿರ ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾಗಿ ಎಸ್.ವಿ. ಪಾಟೀಲ್ ಇವರು ವಾದ ಮಂಡಿಸಿದ್ದರು.
ಪ್ರಕರಣದ ವಿವರ : ಜಗಳೂರು ತಾಲೂಕಿನ ಜಮ್ಮಾಪುರ ಗ್ರಾಮದ ಆಂಜನೇಯ ದೇವಸ್ಥಾನದ ವಿಚಾರದಲ್ಲಿ ವ್ಯಾಜ್ಯ ವಿಚಾರಣೆಹಂತದಲ್ಲಿದೆ.
ಸದರಿ ಸಿವಿಲ್ ಪ್ರಕರಣದಲ್ಲಿ ವಕೀಲರಾದ ರಾಜರಮೇಶಚಂದ್ರ ಭೂಪತಿ ಹಾಜರಾಗಿದ್ದರು. ಇದರಿಂದ ರೊಚ್ಚಿಗೆದ್ದ ನರಸಪ್ಪ, ನಿಂಗಪ್ಪ, ಉಮೇಶ ಹಾಗೂ ರುದ್ರಮುನಿ 2014ರ ಫೆ. 12 ರಂದು ಸಂಜೆ ಆರು ಗಂಟೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದರು.
ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ವಕೀಲರು ದೂರು ನೀಡಿದ್ದರು. ಅಂದಿನ ಪಿಎಸ್ ಐ ಮಲ್ಲಿಕಾರ್ಜುನ ಬಿ ಅವರು ತನಿಖೆ ಮಾಡಿ ನಾಲ್ವರ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಒಂದನೇ ಆರೋಪಿ ನರಸಪ್ಪ ವಿಚಾರಣೆ ವೇಳೆ ಮೃತಪಟ್ಟಿದ್ದಾನೆ. ಹೀಗಾಗಿ ಇನ್ನುಳಿದ 3 ಆರೋಪಿಗಳಿಗೆ 10 ವರ್ಷ ಜೈಲು ತಲಾ 48 ಸಾವಿರ ದಂಡ ವಿಧಿಸಲಾಗಿದೆ.
ರಕ್ಷಣಾ ಕಾನೂನು ರೂಪಿಸಿ:
ವಕೀಲರ ಮೇಲೆ ದೌರ್ಜನ್ಯ ಹಾಗೂ ದಾಳಿ ಮಾಡುವ ಮತ್ತು ಅನಾವಶ್ಯಕವಾಗಿ ತೊಂದರೆ ನೀಡುವ ಜನರಿಗೆ ಈ ತೀರ್ಪು ಎಚ್ಚರಿಕೆಯಾಗಲಿ.
ಸರಕಾರಗಳು ಆದಷ್ಟು ಶೀಘ್ರವಾಗಿ ವಕೀಲರ ರಕ್ಷಣಾ ಕಾನೂನನ್ನು ರೂಪಿಸಿ ಜಾರಿಗೊಳಿಸಲು ಕ್ರಮವಹಿಸಲಿ ಎಂದು ವಕೀಲ ಕೆ.ಎಚ್. ಪಾಟೀಲ ಆಗ್ರಹಿಸಿದ್ದಾರೆ.