ಬೆಂಗಳೂರು prajakiran.com : ಬೆಂಗಳೂರಿನ ಡಿಜೆ ಹಳ್ಳಿ, ಕೆ.ಜೆ.ಹಳ್ಳಿ, ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಆಲ್ ಹಿಂದ್ ಉಗ್ರ ಸಂಘಟನೆ ನಂಟು ಇರುವುದು ಪತ್ತೆಯಾಗಿದೆ. ಈ ಸಂಬಂಧ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ಸಮೀಯುದ್ದೀನ್ ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಾಗರಬಾವಿ ನಿವಾಸಿಯಾದ ಈತ ಮಂಗಳವಾರ ರಾತ್ರಿ ನಡೆದ ಗಲಭೆಯಲ್ಲಿ ಪ್ರಮುಖ ಆರೋಪಿ ಎಸ್ ಡಿಪಿಐ ಪಕ್ಷದ ಮುಜಾಮಿಲ್ ಪಾಷಾ ಜತೆ ಕೈಜೋಡಿಸಿದ್ದ ಪ್ರತಿಭಟನೆ, ಸಂಚು, ಗಲಭೆಯಲ್ಲೂ ಈತನ ಪಾತ್ರವಿತ್ತು ಎಂಬ ಸುಳಿವು ಸಿಕ್ಕಿದೆ.
ಅಲ್ಲದೆ, ಮುಜಾಮಿಲ್ ಪಾಷಾ ಜೊತೆಗೆ ಕೈ ಜೋಡಿಸಿದ್ದ ಪುಲಕೇಶಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ವಾಜೀದ್ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಇದು ಜೆಡಿಎಸ್ ನ ಕಾರ್ಯಕರ್ತರಲ್ಲಿ ನಡುಕವುಂಟು ಮಾಡಿದೆ.
ನಷ್ಟ ವಸೂಲಿಗೆ ತೀರ್ಮಾನ:
ಬೆಂಗಳೂರಿನ ಗಲಭೆಗೆ ಕಾರಣಕರ್ತರಾದ ಆರೋಪಿಗಳ ಮೇಲೆ ರೌಡಿಶೀಟರ್ ತೆಗೆಯುವ ಜೊತೆಗೆ ನಷ್ಟ ಮಾಡಿದವರಿಂದಲೇ ಹಾನಿ ಮೊತ್ತ ವಸೂಲಿ ಮಾಡಲು ಹೈಕೋರ್ಟ್ ಗೆ ಮನವಿ ಸಲ್ಲಿಸಿ ಕ್ಲೇಮ್ ಕಮಿಷನರ್ ನೇಮಿಸಲು ಕೋರಬೇಕು ಎಂದು ರಾಜ್ಯ ಸರಕಾರ ನಿರ್ಧರಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.