ಧಾರವಾಡ prajakiran.com : ಪಂಜಾಬ್ ರಾಜ್ಯದ ಅಮೃತಸರ ಹಾಗೂ ಇತರೆ ಜಿಲ್ಲೆಗಳಲ್ಲಿ ವಿಷಪೂರಿತ ಮದ್ಯ ಸೇವನೆಯಿಂದ ೧೦೦ ಕ್ಕೂ ಹೆಚ್ಚು ಮಂದಿ ಮತ್ತು ಆಂಧ್ರಪ್ರದೇಶ ರಾಜ್ಯ ಪ್ರಕಾಶಂ ಜಿಲ್ಲೆಯಲ್ಲಿ ಸ್ಯಾನಿಟೈಜರ್ ಸೇವಿಸಿ ೧೦ ಮಂದಿ ದುರ್ಮರಣ ಹೊಂದಿರುವ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವಿಷಯಗಳ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ದಾಳಿ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.
ಧಾರವಾಡ ತಾಲೂಕಿನ ತಡಸಿನಕೊಪ್ಪ, ನವಲಗುಂದ ತಾಲೂಕಿನ ಅಣ್ಣಿಗೇರಿ ಹರಣ ಶಿಕಾರಿ ಕಾಲೋನಿ ಕಳ್ಳಭಟ್ಟಿ ಕೇಂದ್ರಗಳು ಹಾಗೂ ಹುಬ್ಬಳ್ಳಿ ಶಹರದ ಸೆಟ್ಲಮೆಂಟ್ ಪ್ರದೇಶ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಅಬಕಾರಿ ಇಲಾಖೆಯಿಂದ ಜಾರಿ ಮತ್ತು ತನಿಖೆ ಕಾರ್ಯಗಳನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ಕಾರ್ಯಕಾರಿ ಅಧಿಕಾರಿಗಳು ನಿರಂತರ ಅಬಕಾರಿ ದಾಳಿಗಳನ್ನು ಕೈಗೊಂಡು ಆಗಸ್ಟ್ ೨೦೨೦ ರ ಮಾಹೆಯಲ್ಲಿ ಇದುವರೆಗೆ ಹುಬ್ಬಳ್ಳಿ ಶಹರದ ಸೆಟ್ಲ್ಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ೫೦ ಲೀಟರ ಮದ್ಯಸಾರವನ್ನು ವಶಪಡಿಸಿಕೊಂಡು ಮೊಕದ್ದಮೆಯನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
ಜಿಲ್ಲೆಯಲ್ಲಿ ೨೦೨೦ ರ ಮಾರ್ಚ್ ೨೧, ರಿಂದ ಜುಲೈ-೨೦೨೦ ರ ವರೆಗೆ ೭೮೯ ಅಬಕಾರಿ ದಾಳಿಗಳನ್ನು ಕೈಗೊಂಡು, ೨೮ ಘೋರ, ೫೧ ಕಲಂ ೧೫ಎ ಹಾಗೂ ೧೭ ಸಾಮಾನ್ಯ ಮೊಕದ್ದಮೆಗಳನ್ನು ದಾಖಲಿಸಿ, ೬೩ ಆರೋಪಿಗಳನ್ನು ದಸ್ತಗೀರ ಮಾಡಲಾಗಿದೆ.
೮೮೬೫ ಲೀ ಮದ್ಯ, ೯೫೧೧ ಲೀ ಬೀರ, ೨.೫೦೦ ಲೀ ಮದ್ಯಸಾರ, ೧೯ ಲೀಟರ ಕಳ್ಳಭಟ್ಟಿ ಸಾರಾಯಿ, ೨೬೫೦ ಲೀ ಬೆಲ್ಲದ ರಸಾಯನ ಹಾಗೂ ೦೬ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ.
ಅಲ್ಲದೇ ಸಾರ್ವಜನಿಕರಿಗೆ ಅಕ್ರಮ ಮದ್ಯ, ಕಳ್ಳಭಟ್ಟಿ ಸಾರಾಯಿ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ.
ಸ್ಯಾನಿಟೈಜರ ಡಿನೇರ್ಡ್ ಸ್ಪಿರಿಟ್ ಹೊಂದಿದ್ದು, ಇದು ವಿಷಕಾರಿಯಾಗಿದ್ದು, ಇದನ್ನು ಸೇವಿಸಿದಲ್ಲಿ ಮಾನವನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸ್ಯಾನಿಟೈಜರನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.
ಅಕ್ರಮ ಚಟುವಟಿಕೆಗಳು ಕಂಡುಬಂದ್ದರೆ ಧಾರವಾಡ ಜಿಲ್ಲೆಯ ವಲಯ-೯೯೭೨೦೪೪೭೫೨, ಹುಬ್ಬಳ್ಳಿ ವಲಯ-೯೬೧೧೩೨೨೩೨೭, ಕಲಘಟಗಿ ವಲಯ-೮೬೧೮೯೪೮೩೬೩, ಕುಂದಗೋಳ ವಲಯ-೯೯೦೨೬೬೩೪೭೮, ನವಲಗುಂದ ವಲಯ-೮೭೨೨೫೭೩೬೧೩, ಧಾರವಾಡ ಉಪ ವಿಭಾಗ-೯೪೪೯೫೯೭೦೮೬, ಹುಬ್ಬಳ್ಳಿ ಉಪ ವಿಭಾಗ ನಂ:೧-೯೪೪೯೫೯೭೦೮೮, ಹುಬ್ಬಳ್ಳಿ ಉಪ ವಿಭಾಗ ನಂ:೨-೯೪೪೯೫೯೭೦೯೦ ಹಾಗೂ ಕಚೇರಿಯ ಟೋಲ್ ಫ್ರೀ ನಂ: ೧೮೦ ೦೪೨೫ ೦೭೪೨ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಅಬಕಾರಿ ಇಲಾಖೆ ಜಿಲ್ಲಾ ಉಪ ಆಯುಕ್ತ ಶಿವನಗೌಡ ಪಾಟೀಲ ತಿಳಿಸಿದ್ದಾರೆ.