ಧಾರವಾಡ prajakiran.com : ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡದ ಪೆಂಡಾರ್ ಗಲ್ಲಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಊಟದ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿದ್ದಾಗ ಜಗಳ ಬಿಡಿಸಲು ಹೋಗಿರುವ ಸಾದಿಕ್ ಬಿಡ್ನಾಳ ಎಂಬ ವ್ಯಕ್ತಿಯೇ ತಳ್ಳಾಟ, ನೂಕಾಟದಲ್ಲಿ ಸಿಲುಕಿ ನಂತರ ಎತ್ತರದಿಂದ ಉರುಳಿ ಬಿದ್ದು ಸಾವನ್ನಪ್ಪಿದ್ದಾನೆ.
ಪೆಟ್ಟು ಬಿದ್ದ ತಕ್ಷಣ ಆತನನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸ್ಥಳೀಯರು ತೆಗೆದು ಕೊಂಡು ಬರುವಾಗ ಮಾರ್ಗ ಮಧ್ಯದಲ್ಲಿ ಸಾದಿಕ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಮಾಹಿತಿ ಅರಿತು ಘಟನಾ ಸ್ಥಳಕ್ಕೆ ದೌಡಾಯಿಸಿದ ಧಾರವಾಡದ ಶಹರ ಠಾಣೆ ಪೊಲೀಸರು ಈ ಸಂಬಂಧ ರಿಜ್ವಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಕುರಿತು ಧಾರವಾಡ ಶಹರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.