ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಿಬಿಐ ಅಧಿಕಾರಿಗಳ ತಂಡ ನೇರವಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕದ ತಟ್ಟಿದೆ.
ಆಯುಕ್ತರ ಕಚೇರಿಯ ಒಳಬಂದ ಶಾಖೆಯಲ್ಲಿ ಇಂಚಿಂಚೂ ಬಿಡದೆ ಹಲವು ಗಂಟೆಗಳ ಕಾಲ ದಾಖಲೆಗಳ ಶೋಧ ಕಾರ್ಯ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಈ ಹಿಂದೆ ಯೋಗೀಶಗೌಡ ಕುಟುಂಬ ನೀಡಿದ್ದ ಮರು ತನಿಖೆಯ ದೂರು ಪ್ರತಿಯ ಆ ದಾಖಲೆಗಳು ಎಲ್ಲಿ ಹೋದವು.
ಯಾರು ಅವುಗಳನ್ನು ಮುಚ್ಚಿಟ್ಟಿದ್ದರು. ಮುಚ್ಚಿಟ್ಟಿರಬಹುದು. ಯಾಕೆ ಮುಚ್ಚಿಡಲಾಗಿತ್ತು. ಇದರ ಹಿಂದೆ ಯಾರಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಇದರಲ್ಲಿ ಕೈ ಜೋಡಿಸಿದ್ದರಾ ಎಂಬ ನಿಟ್ಟಿನಲ್ಲಿ ತನಿಖೆಯ ಜಾಡು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಬಿಐ ನೇರವಾಗಿ ಪೊಲೀಸ್ ಆಯುಕ್ತರ ಕಚೇರಿಯ ಒಳಬಂದ ಶಾಖೆಯಲ್ಲಿ ಈ ಹುಡುಕಾಟ ನಡೆಸಿರುವುದು ಹಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ನಡುಕ ಹುಟ್ಟಿಸಿದೆ.
ಈಗಾಗಲೇ ಈ ಪ್ರಕರಣದಲ್ಲಿ ಹೆಸರು ತಳಕು ಹಾಕಿಕೊಂಡು ಹಲವು ಬಾರಿ ವಿಚಾರಣೆ ಎದುರಿಸಿ ನರಳಾಡುತ್ತಿರುವ ಹಲವು ಪೊಲೀಸರ ಬಂಧನ ಭೀತಿಯ ಬೆನ್ನಲ್ಲೇ ಸಿಬಿಐನ ಈ ಹುಡುಕಾಟ ಭಾರೀ ಮಹತ್ವ ಪಡೆದುಕೊಂಡಿದೆ.
ಈ ಸಂಬಂಧ ನಿನ್ನೆಯಷ್ಟೇ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಭಾಸ್ಕರ ಕೌಡಿಕೇರಿ ಅವರನ್ನು ಕೂಡ ಸಿಬಿಐ ಅಧಿಕಾರಿಗಳು ಹಲವು ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದ್ದರು.
ಯೋಗೀಶಗೌಡ ಕುಟುಂಬದ ಸದಸ್ಯರು ನೀಡಿದ ಮರು ತನಿಖೆ ದೂರನ್ನು ಮುಚ್ಚಿಟ್ಟಿದ್ದರು ಎಂಬ ಗಂಭೀರ ಆರೋಪ ಮತ್ತೇ ಪೊಲೀಸ್ ಇಲಾಖೆಯ ಮೇಲೆ ಅನುಮಾನ ಮೂಡಿಸುವಂತೆ ಮಾಡಿದೆ.
ಸಿಬಿಐ ತಡಕಾಡಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದರು ಎಂದು ಕಚೇರಿಯ ಉನ್ನತ ಮೂಲಗಳು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿವೆ.