ಹಾವೇರಿ prajakiran.com : ಉಡಗಣಿ, ತಾಳಗುಂದ ಕೆರೆ ತುಂಬಿಸುವ ಯೋಜನೆಯ ಪೈಪ್ಲೈನ್ ಅಳವಡಿಸಲು ರೈತರ ಜಮೀನು ಸ್ವಾಧೀನ ವಿರೋಧಿಸಿ ಕಳೆದ ಹದಿನಾಲ್ಕು ದಿನಗಳಿಂದ ರಟ್ಟಿಹಳ್ಳಿಯಲ್ಲಿ ರೈತರು ಕೈಗೊಂಡಿದ್ದ ಸತ್ಯಾಗ್ರಹ ಸ್ಥಳಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬುಧವಾರ ಭೇಟಿ ನೀಡಿದರು.
ಈ ವೇಳೆ ಧರಣಿ ನೇತೃತ್ವ ವಹಿಸಿದ್ದ ಹಿರಿಯ ವಕೀಲರಾದ ಬಿ.ಡಿ.ಹಿರೇಮಠ ಹಾಗೂ ರೈತರೊಂದಿಗೆ ಮಾತನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲಾಗುವುದು. ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿಕೊಂಡರು.
ದಿಟ್ಟಹೋರಾಟಗಾರರಾದ ಹಿರಿಯ ವಕೀಲರಾದ ಬಿ.ಡಿ.ಹಿರೇಮಠ ಅವರು ನನಗೆ 40 ವರ್ಷದಿಂದ ಸ್ನೇಹಿತರು. ಅವರ ಹೋರಾಟದಲ್ಲಿ ನಾನು ಭಾಗಿಯಾಗಿದ್ದೇನೆ.
ಹಲವು ಹೋರಾಟ ನಡೆಸಿ ಯಶಸ್ಸು ತಂದಕೊಟ್ಟ ಕೀರ್ತಿ ಅವರದ್ದಾಗಿದೆ. ಅವರು ಕಾನೂನು ತಿಳಿದವರಾಗಿದ್ದು, ನಾವು ನೀವು ಕೂಡಿ ಸಮಸ್ಯೆ ಬಗೆಹರಿಸೋಣ ಎಂದು ಮನವಿ ಮಾಡಿಕೊಳ್ಳಲಾಗಿದೆ.
ಅವರ ಪ್ರಮುಖ ಬೇಡಿಕೆಗಳಾದ ತುಂಗಾ ಮೇಲ್ದಂಡೆ ಯೋಜನೆಯಡಿ ರೈತರಿಗೆ ಬಾಕಿ ಇರುವ ಪರಿಹಾರ ಪಾವತಿ ಹಾಗೂ ಉಡಗಣಿ- ತಾಳಗುಂದ ಕೆರೆ ತುಂಬುವ ಯೋಜನೆಯ ಪೈಪ್ ಅಳವಡಿಕೆ ಪರ್ಯಾಯ ಮಾರ್ಗದಲ್ಲಿ ಅಳವಡಿಸಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು.
ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಉಡತಣಿ-ತಾಳಗುಂದ ಯೋಜನೆಗೆ ರೈತರ ಜಮೀನಿನಲ್ಲಿ ಪೈಪ್ ಅಳವಡಿಸುವ ಬದಲು ಸರ್ಕಾರಿ ಜಮೀನನಲ್ಲಿ ಪೈಪ್ಲೈನ್ ಅಳವಡಿಸಿ ನೀರು ತೆಗೆದುಕೊಂಡು ಹೋಗಲು ರೈತರ ಯಾವುದೇ ತಕರಾರು ಇರುವುದಿಲ್ಲ
ಹಾಗೂ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ತಾಲೂಕಿನ ರೈತರಿಗೆ ಬಾಕಿ ಇರುವ ರೂ.154 ಕೋಟಿ ಹಣವನ್ನು ಶೀಘ್ರವೇ ಪಾವತಿಮಾಡಬೇಕು ಎಂಬ ಎರಡು ಬೇಡಿಕೆಗಳನ್ನು ಇಟ್ಟಿದ್ದಾರೆ.
ಕೆರೆ ತುಂಬಿಸುವ ಯೋಜನೆಗೆ ಈಗಿರುವ ಮಾರ್ಗಬದಲಿಸಿ ಪರ್ಯಾಯ ಮಾರ್ಗದಲ್ಲಿ ಪೈಪ್ ಅಳವಡಿಸುವ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ತಾಂತ್ರಿಕ ವಿಷಯವಾಗಿರುವುದರಿಂದ ಎರಡುಮೂರು ದಿನದಲ್ಲಿ ಅಧ್ಯಯನಮಾಡಿ ವರದಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪರ್ಯಾಯ ಮಾರ್ಗದಲ್ಲಿ ಸಾಧ್ಯವಾದರೆ ಪೈಪ್ ಅಳವಡಿಸಲಾಗುವುದು ಎಂದು ಹೇಳಿದರು.
ಕೆರೆ ತುಂಬಿಸುವ ಯೋಜನೆಗೆ 10 ಮೀಟರ್ ಭೂ ಸ್ವಾಧೀನಪಡಿಸಿಕೊಂಡು ಪೈಪ್ ಅಳವಡಿಕೆ ರಸ್ತೆ ನಿರ್ಮಾಣ ಮಾಡುವ ಗೊಂದಲವಿತ್ತು. ಈಗ ಈ ಯೋಜನೆಯ ಸ್ವರೂಪವನ್ನು ಬದಲಾಯಿಸಿ ಕೇವಲ ನಾಲ್ಕು ಮೀಟರ್ ಮಾತ್ರ ತೆಗೆದುಕೊಳ್ಳಲಾಗುವುದು. ರಸ್ತೆ ನಿರ್ಮಿಸುವುದಿಲ್ಲ.
ತುಂಗಾ ಮೇಲ್ದಂಡೆ ಯೋಜನೆಯಡಿ ಅಲ್ಪ ಪರಿಹಾರ ಪಡೆದ ರೈತರು 28ಎ ದಲ್ಲಿ ಹೆಚ್ಚುವರಿ ಪರಿಹಾರ ಪಾವತಿಗೆ ಬಾಕಿ ಇರುವ ರೈತರಿಗೆ ಹಣ ಪಾವತಿಗೆ ಬೇಡಿಕೆ ಸಲ್ಲಿಸಲಾಗಿದೆ. ಭೂಸ್ವಾಧೀನ ಪರಿಹಾರ ಬಹಳ ದಿನಗಳಿಂದ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು.
ರೆಗ್ಯೂಲರ್ ಭೂಸ್ವಾಧೀನ ಹಾಗೂ ವಿಷಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾಗುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ 21ನೇ ತಾರೀಖು ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಬಿ.ಡಿ.ಹಿರೇಮಠ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಹುಬ್ಬಳ್ಳಿ KIMS ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಯಲ್ಲಿ ಕಳೆದ 14 ದಿನಗಳಿಂದ ರೈತರ ಹೋರಾಟದಲ್ಲಿ ಅಮರಣಾಂತ ಉಪವಾಸ ಕೈಗೊಂಡಿದ್ದರಿಂದ ತೀವ್ರ ನಿಶಕ್ತಗೊಂಡಿದ್ದರು.
ಇದರಿಂದಾಗಿ ಕಿಡ್ನಿ, ಹೃದಯ ಸಂಬಂಧಿ ತೊಂದರೆಯಾಗಬಹುದೆಂದು ತಕ್ಷಣ ಆಂಬುಲೆನ್ಸ್ ಮೂಲಕ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.