ಹೊಸೂರು-ಉಡಗಣಿ -ತಾಳಗುಂದ ಏತನೀರಾವರಿ ಯೋಜನೆಗೆ ರೈತರ ಜಮೀನು ಭೂಸ್ವಾಧೀನ ವಿರೋಧಿ ಹೋರಾಟ
ಹುಬ್ಬಳ್ಳಿ prajakiran.com : ಹೊಸೂರು-ಉಡಗಣಿ -ತಾಳಗುಂದ ಏತನೀರಾವರಿ ಯೋಜನೆಗೆ ರೈತರ ಜಮೀನು ಭೂಸ್ವಾಧೀನ ವಿರೋಧಿಸಿ ಧಾರವಾಡ ಹೈಕೋರ್ಟ್ ನ ಹಿರಿಯ ವಕೀಲ ಬಿ.ಡಿ. ಹಿರೇಮಠ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಹದಿನಾಲ್ಕು ದಿನ ಪೂರೈಸಿದೆ.
ಬುಧವಾರ ಸಂಜೆ ಅವರು ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಸ್ವಲ್ಪ ಚೇತರಿಸಿಕೊಳ್ಳುತ್ತಿರುವ ಅವರು ಪ್ರಜಾಕಿರಣ. ಕಾಮ್ ದೊಂದಿಗೆ ಮಾತನಾಡಿ, ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ಕೈ ಬಿಡುವ ಪ್ರಶ್ನೆ ಇಲ್ಲ.
ಹಾವೇರಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಬಿ.ಡಿ. ಹಿರೇಮಠ ಎಚ್ಚರಿಸಿದರು.
ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಪುರಾತನ ಕೋಟೆ ಹತ್ತಿರ ರೈತರ ಜಮೀನಿನಲ್ಲಿ ಪೈಪ್ ಲೈನ್ ಹಾಕುವ ಬದಲಿಗೆ ಸರಕಾರದಜಮೀನಿನಲ್ಲಿ ಹಾಕಲಿ ಎಂದು ಆಗ್ರಹಿಸಿದರು.
ಈಗಾಗಲೇ ಅನೇಕ ರೈತರು ಜಮೀನು ಕಳೆದುಕೊಂಡರೂ ಹದಿನೆಂಟು ನೂರು ರೈತರಿಗೆ ನೀರಾವರಿ ಸೌಲಭ್ಯ ಮರಿಚಿಕೆಯಾಗಿ ಉಳಿದಿದೆ.
ಅದೇ ರೀತಿಯಾಗಿ ಹಾವೇರಿ ಜಿಲ್ಲೆಯ ಸಾವಿರಾರು ರೈತರಿಗೆ ಕಳೆದ 20 ವರ್ಷಗಳಿಂದ ಸರ್ಕಾರ ವಿವಿಧ ಯೋಜನೆಗಳಿಗೆ ಭೂ ಸ್ವಾಧೀನ ಮಾಡಿಕೊಂಡ ಪರಿಹಾರ ಹಣ ಈವರೆಗೆ ಬಿಡುಗಡೆಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಲ್ಲದೆ, ಅಪರ್ ತುಂಗಾ ಯೋಜನೆಯಲ್ಲಿಯೂ ಸಹ ಭೂಮಿ ಕಳೆದುಕೊಂಡಂತಹ ರೈತರಿಗೆ ಪರಿಹಾರ ಸಿಗದೇ ಇರುವಾಗ ಮತ್ತೆ ರೈತರು ಯಾವ ಪುರುಷಾರ್ಥಕ್ಕೆ ಸರಕಾರಕ್ಕೆ ಜಮೀನು ನೀಡಬೇಕು ಎಂದು ತರಾಟೆ ತೆಗೆದುಕೊಂಡರು.
ಇದೀಗ ರೈತರು
ತಮ್ಮ ಜಮೀನನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವ ಪ್ರಸಂಗ ಎದುರಾಗಿರುವುದು ನೋವಿನ ಸಂಗತಿಯಾಗಿದೆ.
ಅದಕ್ಕಾಗಿಯೇ ನಾನು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದೇನೆ. ಸ್ವತಃ ಸಿಎಂ ಆಗಮಿಸಿ ರೈತರಿಗೆ ನ್ಯಾಯ ನೀಡಬೇಕು.
ಜಮೀನನ್ನು ಕಳೆದುಕೊಳ್ಳುವ ಆತಂಕದಲ್ಲಿ ರೈತರು ದಿನನಿತ್ಯ ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ಕಿಡಿಕಾರಿದರು.
ಸುಮಾರು 50 ವರ್ಷಗಳಿಂದ ಊರಿನಿಂದ ಮೈಸೂರಿನವರೆಗೂ ಪಿಡಬ್ಲ್ಯೂಡಿ ರಸ್ತೆಗಾಗಿ ರೈತರ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡಿರುವ ಸರಕಾರ ಅದರ ಪರಿಹಾರ ಹಣ ಈತನಕ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೈಕೋರ್ಟ್ ಹಿರಿಯ ವಕೀಲ ಬಿ.ಡಿ. ಹಿರೇಮಠ ಗುಡುಗಿದರು.
ಈ ಹಿನ್ನೆಲೆಯಲ್ಲಿ
ಮತ್ತೆ ರೈತರ ಜಮೀನುಗಳನ್ನು ನೀರಾವರಿ ಯೋಜನೆ ಹೆಸರಿನಲ್ಲಿ ಯಾಮಾರಿಸುವುದು ಸರಿಯಾದ ಬೆಳವಣಿಗೆ ಅಲ್ಲ.
ಬೇಡಿಕೆ ಈಡೇರಿಸುವರೆಗೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿ.ಡಿ. ಹಿರೇಮಠ ಸ್ಪಷ್ಟಪಡಿಸಿದರು