ತಿರುವನಂತಪುರ (ಕೇರಳ) prajakiran.com : ದುಬೈಯಿಂದ ತನ್ನ ಗರ್ಭಿಣಿ ಪತ್ನಿಯನ್ನು ಊರಿಗೆ ಕಳುಹಿಸಲು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದ ನಿಧಿನ್ ಚಂದ್ರನ್ ಎಂಬ ಯುವಕ ಮತ್ತೆಂದೂ ಬಾರದ ಊರಿಗೆ ಪ್ರಯಾಣಿಸಿದ್ದಾನೆ.
ಭಾರತದಲ್ಲಿ ಕರೋನಾ ವ್ಯಾಪಿಸಲು ತೊಡಗಿದಾಗ ಹೊರದೇಶಗಳಿಂದ ದೇಶಕ್ಕೆ ಬರುವ ವಿಮಾನ ಸಂಚಾರ ನಿಷೇಧಗೊಂಡ ಸಂದರ್ಭದಲ್ಲಿ ದುಬೈಯಲ್ಲಿದ್ದ ಏಳು ತಿಂಗಳ ಗರ್ಭಿಣಿ ಮಡದಿ ಆದಿರಾಳಿಗೆ ಊರಿಗೆ ಹೋಗಲು ವ್ಯವಸ್ಥೆ ಮಾಡಬೇಕೆದು ಆಕೆಯ ಮೂಲಕವೇ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು ಇದೇ ಕೇರಳದ ಪೆರಾಂಬ್ರ ಎಂಬ ಹಳ್ಳಿಯ 28 ವರ್ಷದ ಯುವಕ ನಿಧಿನ್ ಚಂದ್ರನ್.
ಆ ಮೂಲಕ ವಿದೇಶದಲ್ಲಿ ನೆಲೆಸಿದ್ದ ಸಾವಿರಾರು ಅನಿವಾಸಿ ಭಾರತೀಯರನ್ನು ತವರಿಗೆ ಮರಳುವಂತೆ ಮಾಡಿದ್ದ. ಆದರೆ ತಾನು ಮಾತ್ರಅಲ್ಲಿಯ ಜನರ ನೆರವಿಗೆ ಧಾವಿಸಿದ್ದ.
ಯುವ ಮೆಕಾನಿಕಲ್ ಇಂಜಿನಿಯರ್ ಅನಿವಾಸಿ ಭಾರತೀಯನಾಗಿದ್ದ ನಿಧಿನ್ ಚಂದ್ರನ್ ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆ ತರಲು ವಂದೇ ಭಾರತ್ ಮಿಷನ್ ವಿಮಾನಯಾನ ಆರಂಭವಾದಾಗ ಮೊದಲ ವಿಮಾನದಲ್ಲಿ ಕೋಝಿಕೋಡಿಗೆ ತನ್ನ ಪತ್ನಿ ಆದಿರಾ ಜೊತೆಗೆ ತಾಯ್ನಾಡಿಗೆ ಮರಳಲು ಅವಕಾಶ ದೊರೆಕಿತ್ತು.
ಆದರೆ ನಿಧಿನ್ ಇದು ಮೊದಲ ವಿಮಾನವಾದುದರಿಂದ ತನಗಿಂತಲೂ ತುರ್ತಾಗಿ ಪ್ರಯಾಣ ಮಾಡಬೇಕಾಗಿರುವವರು ಇರುವುದರಿಂದ ತನಗಿದ್ದ ಅವಕಾಶವನ್ನು ಮುಂದೂಡಿ ಅರ್ಹತೆಯಿದ್ದ ಇನ್ನಿಬ್ಬರಿಗೆ ಟಿಕೇಟ್ ಕೊಡಿಸಿ ಪ್ರಯಾಣಿಸಲು ಅನುವು ಮಾಡಿಕೊಟ್ಟು ಸಾರ್ಥಕತೆ ಮೆರೆದಿದ್ದ.
ಕೇವಲ ತನ್ನ ಗರ್ಭಿಣಿ ಮಡದಿಯನ್ನು ಮಾತ್ರ ಊರಿಗೆ ಕಳುಹಿಸಿ ಸಮಾಧಾನ ಪಟ್ಟಿದ್ದ.
ಹಾಗೆ ದುಬೈನಲ್ಲೇ ಇದ್ದ ನಿಧಿನ್ ಹೃದಯಾಘಾತದಿಂದ ಅಸುನೀಗಿದ್ದಾರೆ ಎಂಬ ಸುದ್ದಿ ಬಂದಿದೆ. ವಿಧಿಯ ಕ್ರೂರ ಆಟಕ್ಕೆ ಯುವ ಇಂಜಿನಿಯರ್ ಬಲಿಯಾಗಿದ್ದು ವಿಪರ್ಯಾಸ.
ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ನಿಧಿನ್ ಬ್ಲಡ್ ಡೋನರ್ಸ್ ಕೇರಳ ಇದರ ದುಬೈ ಪ್ರತಿನಿಧಿಯಾಗಿ ರಕ್ತದಾನದಂತಹ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕರೋನಾ ಕಾಲದಲ್ಲೂ ಈ ಕಾರ್ಯದಲ್ಲೇ ಮಗ್ನರಾಗಿದ್ದರು.
ತುಂಬು ಗರ್ಭಿಣಿಯಾಗಿದ್ದ ಆದಿರಾ ಮಂಗಳವಾರ ಹೆಣ್ಣು ಮಗುವಿಗೆ ಜನನ ನೀಡಿದ್ದಾರೆ. ಆದರೆ ಪತ್ನಿ ಆದಿರಾ ಆರೋಗ್ಯ ದೃಷ್ಟಿಯಿಂದ ಪತಿಯ ವಿಯೋಗದ ವಾರ್ತೆ ತಿಳಿಸದೆ ಕುಟುಂಬ ವರ್ಗ ತೊಳಲಾಟದಲ್ಲಿದೆ.