ಧಾರವಾಡ ಪ್ರಜಾಕಿರಣ.ಕಾಮ್ : ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರು ಕಳೆದ 5 ದಿನಗಳಿಂದ ಆಮರಣ ಉಪವಾಸ ಸತ್ಯಾಗ್ರಹವನ್ನು ಪಟ್ಟು ಹಿಡಿದು ಮುಂದುವರೆಸಿರುವುದರಿಂದ ಶುಕ್ರವಾರ ಸಂಜೆ ಆರೋಗ್ಯ ಮತ್ತೆ ಕ್ಷೀಣವಾಗಿದೆ ಎಂದು ವೈದ್ಯರು ತಿಳುವಳಿಕೆ ನೀಡಿ ಪತ್ರಕ್ಕೆ ಸಹಿ ಮಾಡಿಸಿಕೊಂಡರು.
ಧಾರವಾಡ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ್ ಮಾನಕರ್ ಹಾಗೂ ಅವರ ತಂಡ ಮಧುಮೇಹದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹೀಗಾಗಿ ನೀವು ಜ್ಯೂಸ್ ಅಥವಾ ಗಂಜಿ ಸೇವನೆ ಮಾಡಲೇಬೇಕು ಎಂದು ಸಲಹೆ ನೀಡಿದರು.
ಆದರೆ, ನಮ್ಮ ಬೇಡಿಕೆ ಈಡೇರಿಸಲು ಸರಕಾರ ಬದ್ದವಾಗುವರೆಗೆ ನಾನು ಆಮರಣ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುತ್ತೇನೆ ಎಂದು ಪಟ್ಟು ಹಿಡಿದರು.
ಹೀಗಾಗಿ ವೈದ್ಯರು ತಿಳುವಳಿಕೆ ಪತ್ರಕ್ಕೆ ಮತ್ತೆ ಎರಡನೇ ಬಾರಿ ಸಹಿ ಮಾಡಿಸಿಕೊಂಡರು. ಅಲ್ಲದೆ, ಈ ಕುರಿತು ಪ್ರತಿ ದಿನ ಆರೋಗ್ಯ ವರದಿಯನ್ನು ಸರಕಾರದ ಗಮನಕ್ಕೆ ತರಲಾಗುತ್ತಿದೆ ಹೇಳಿದರು.
ಇದೇ ವೇಳೆ ಹೋರಾಟ ಬೆಂಬಲಿಸಿ ಮಾಜಿ ಶಾಸಕಿ ಸೀಮಾ ಅಶೋಕ ಮಸೂತಿ, ವಾರ್ಡ್ ನಂಬರ್ 7 ರ ಪಾಲಿಕೆ ಸದಸ್ಯರು ಆಗಿರುವ ದೀಪಾ ಸಂತೋಷ ನೀರಲಕಟ್ಟಿ, ಬಿಜೆಪಿ ಮುಖಂಡರಾದ ಉದಯ ಯಂಡಿಗೇರಿ, ಲಿಂಬಯ್ಯದೇವರಮಠ ಸೇರಿದಂತೆ ಅನೇಕರು ಆಗಮಿಸಿ ನೈತಿಕ ಬೆಂಬಲ ಸೂಚಿಸಿದರು.
ಅಲ್ಲದೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಅಶೋಕ ಮಸೂತಿ, ಸಂತೋಷ ನೀರಲಕಟ್ಟಿ ಸೇರಿದಂತೆ ಅನೇಕ ಮುಖಂಡರು ಬೆಂಬಲ ಸೂಚಿಸಿದರು.
ಇದೇವೇಳೆ ಅನೇಕ ನೌಕರರು ಬಸವರಾಜ ಕೊರವರ ಆರೋಗ್ಯಕ್ಕೆ ಏನಾದರೂ ತೊಂದರೆ ಆದಲ್ಲಿ ಸರಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ಗುಡುಗಿದರು.
ಇದೇ ವೇಳೆ ಅನುಪ ಬಿಳಗಿ ಹಾಗೂ ಬಸವರಾಜ ಮುಕ್ಕಲ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಇಬ್ಬರಿಗೂ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಯಿತು. ಇದರಿಂದಾಗಿ ಅಸ್ವಸ್ಥಗೊಂಡವರ ಸಂಖ್ಯೆ ನಾಲ್ಕಕ್ಕೆ ಏರಿದಂದಾಗಿದೆ.