ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರಗೆ ವಿವಿಧ ಹಳ್ಳಿಗಳ ಗ್ರಾಮಸ್ಥರ ಸಾಥ್
ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಭಿನ್ನ ಹಾಗೂ ವಿಶಿಷ್ಟ ಪ್ರತಿಭಟನೆ
ಸಿ ಕೆಟಗೇರಿಯ 50 ಸಾವಿರ ಸಹಾಯ ಧನ ಸಾಂಕೇತಿಕವಾಗಿ ಸರಕಾರಕ್ಕೆ ಹಿಂತರುಗಿಸಿ ಸಾತ್ವಿಕ ಆಕ್ರೋಶ
ಧಾರವಾಡ ಪ್ರಜಾಕಿರಣ ಕಾಮ್ : ಧಾರವಾಡ ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಅಕಾಲಿಕ ಮನೆಗೆ ನೂರಾರು ಮನೆಗಳು ಧರೆಗೆ ಉರುಳಿವೆ.
ಆದರೆ, ಧಾರವಾಡ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ನೂರಾರು ಜನರಿಗೆ ಮನೆ ಹಾನಿ ಪರಿಹಾರ ವಿತರಣೆ ಈವರೆಗೆ ಮರಿಚಿಕೆಯಾಗಿ ಉಳಿದಿದೆ.
ಈ ಸಂಬಂಧ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ವಿವಿಧ ಗ್ರಾಮದ ನೂರಾರು ಸಂತ್ರಸ್ತರಿಗೆ ಸೂರು ಒದಗಿಸುವಂತೆ ಒತ್ತಾಯಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಶೀಲ್ದಾರ ಕಚೇರಿ ಎದುರು ಅಡುಗೆ ಮಾಡಿ, ಊಟ ಮಾಡುವ ಮೂಲಕ ಸರಕಾರದ ಗಮನ ಸೆಳೆಯಲಾಗಿತ್ತು.
ಆದರೂ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜ್ಯ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ
ವಿಧಾನಭೆಯ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಡಿ.22ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮನೆಹಾನಿಯೊಳಗಾದ ಸಂತ್ರಸ್ತ ಮನ್ ರಾವ್ ತೇಲಿಯವರ ಮನೆಯಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ವಿವಿಧ ಗ್ರಾಮದ ಮನೆ ಕಳೆದುಕೊಂಡ ನೂರಾರು ಜನರ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ.
ಆ ಮೂಲಕ ಸರ್ಕಾರಕ್ಕೆ ಬಿಸಿ ತಾಕಿಸುವ ಕೆಲಸ ಮಾಡಲಾಗುತ್ತಿದೆ. ಅದರ ಜೊತೆಗೆ ಸಂಪೂರ್ಣ ಬಿದ್ದ ಮನೆಗೆ ಕೇವಲ 50 ಸಾವಿರ ಪರಿಹಾರ ನೀಡಿ ಸಿ ಕೆಟಗೇರಿ ಮಾಡಿದ ಹಿನ್ನೆಲೆಯಲ್ಲಿ ಆ ಹಣವನ್ನು ಸಾಂಕೇತಿಕವಾಗಿ ಸರಕಾರಕ್ಕೆ ಹಿಂತಿರುಗಿಸುವ ಮೂಲಕ ನಮ್ಮ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಲಿದ್ದೇವೆ ಎಂದು ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ತಿಳಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಹೆಬ್ಬಳ್ಳಿ ಗ್ರಾಮಸ್ಥರ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಹೆಬ್ಬಾಳ, ಅಶೋಕ ಲಕ್ಕಮ್ಮನವರ, ಕಲ್ಲಪ್ಪ ಬಡಿಗೇರ,
ಹಟೇಲ ಸಾಬ ಗುಡಿಸಲಮನಿ, ಶಿವಾನಂದ ತಳವಾರ ಸೇರಿದಂತೆ ಅನೇಕ ಗ್ರಾಮಸ್ಥರು ಪಾಲ್ಗೊಂಡಿದ್ದರು.