ವೆಂಟಿಲೇಟರ್ ಕೊರತೆ
ಕರೋನೇತರ ರೋಗಿಗಳ ಪರದಾಟ
ಮಂಜುನಾಥ ಸಿಂಗ್ ರಾಠೋಢ
ಗದಗ: ಗುತ್ತಿಗೆ ನೌಕರನೊಬ್ಬ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಹಾರಾಟಕ್ಕೆ ಮರದ ಕೊಂಬೆ ತೊಡಕಾಗುತ್ತೆಂದು ಕೊಂಬೆ ಕತ್ತರಿಸುವ ವೇಳೆ ಆಯತಪ್ಪಿ ಬಿದ್ದು, ತಲೆಗೆ ಗಂಭೀರ ಪೆಟ್ಟಾಗಿದ್ದ.
ಸರಿಯಾದ ಸಮಯಕ್ಕೆ ವೆಂಟಿಲೇಟರ್ ಸಿಗದ ಹಿನ್ನಲೆಯಲ್ಲಿ ಆತ ಮೃತಪಟ್ಟ ಘಟನೆ ನಗರದಲ್ಲಿ ಸೋಮವಾರ ಜರುಗಿದೆ.
ಅಂಬ್ಯುಲೆನ್ಸ್ ಮೂಲಕ ಬಸವರಾಜನನ್ನು ಗದಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ, ವೆಂಟಿಲೇಟರ್ ಕೊರತೆಯ ನೆಪವೊಡ್ಡಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮತ್ತು ಎಸ್ಡಿಎಂಸಿ ಆಸ್ಪತ್ರೆಯಲ್ಲೂ ವೆಂಟಿಲೇಟರ್ ಕೊರತೆ ತಿಳಿಸಿದ್ದರಿಂದ ಬಸವರಾಜನ ಕುಟುಂಬಸ್ಥರು ವೆಂಟಿಲೇಟರ್ ವ್ಯವಸ್ಥೆ ಇರುವ ಖಾಸಗಿ ಆಸ್ಪತ್ರೆ ದಾಖಲಾಗಿದ್ದ ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.
ಕುಟುಂಬದ ಆಧಾರ ಸ್ಥಂಭ
ಬೆಟಗೇರಿಯ ಅಂಬೇಡ್ಕರ್ ನಗರದ ನಿವಾಸಿ ಬಸವರಾಜ ನಿಂಗಪ್ಪ ಬೊಳಪ್ಪನವರ (೪೧) ಮೃತಪಟ್ಟ ದುರ್ದೈವಿ. ಪಿಡಬ್ಲೂಡಿ ಇಲಾಖೆಯ ಗುತ್ತಿಗೆ ನೌಕರನಾಗಿ ಕಳೆದ ೬ ವರ್ಷದಿಂದ ನಿರ್ವಹಿಸುತ್ತಿದ್ದ.
ಬಸವರಾಜ ಬೊಳಪ್ಪನವರ ಇಡೀ ಕುಟುಂಬಕ್ಕೆ ಅವರೇ ಆಧಾರಸ್ಥಂಭವಾಗಿದ್ದ. ಅವರ ಸಾವಿನಿಂದ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದೆ. ಕರ್ತವ್ಯ ನಿರತವೇಳೆ ಸಾವನ್ನಪ್ಪಿರುವದರಿಂದ ಬಸವರಾಜ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.
ಗದಗದಲ್ಲಿ ವೆಂಟಿಲೇಟರ್ ಬರ:
ಕೊರೊನಾ ಸೋಂಕಿಗೆ ಹೆಚ್ಚಿನ ಗಮನ ಹರಿಸಿದ ಪರಿಣಾಮ ಜಿಲ್ಲೆಯಲ್ಲಿ ನಾನಾ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವೆಂಟಿಲೇಟರ್ ದೊರೆಯದೇ ನರಳುವ ಸ್ಥಿತಿಯಿದೆ.
ಕೊರೊನೇತರ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಚಿಕಿತ್ಸೆ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಬಹುತೇಕ ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿನ ಐಸಿಯು, ವೆಂಟಿಲೇಟರ್ ಬೆಡ್ಗಳು ಭರ್ತಿಯಾಗಿವೆ. ಹೊಸದಾಗಿ ರೋಗಿಗಳು ಬಂದರೂ ಬೆಡ್ ಇಲ್ಲ ಎಂದು ಬೇರೆ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದ ರೋಗಿಗಳ ಕಡೆಯವರು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ.
ಗದಗ ಆಸ್ಪತ್ರೆಯಲ್ಲಿರುವ ೧೮ ವೆಂಟಿಲೇಟರ್ಗಳನ್ನು ಕರೋನಾ ರೋಗಿಗಳಿಗೆ ಉಪಯೋಗಿಸುತ್ತಿದ್ದಾರೆ. ಮಂಗಳವಾರ ಜಿಲ್ಲಾಸ್ಪತ್ರೆಗೆ ಮತ್ತೆ ೧೫ ವೆಂಟಿಲೇಟರ್ ಬಂದಿದ್ದು, ಇವುಗಳನ್ನು ಕರೋನಾ ರೋಗಿಗಳಿಗೆ ಉಪಯೋಗಿಸಲಾಗುತ್ತದೆ.
” ನನ್ನ ಅಣ್ಣನಿಗೆ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ವೆಂಟಿಲೇಟರ್ ಚಿಕಿತ್ಸೆ ಅಗತ್ಯವಿದ್ದ ಕಾರಣ ಗದಗದಲ್ಲಿ ಇಲ್ಲದೆ ಹುಬ್ಬಳ್ಳಿಗೆ ರವಾನಿಸಲು ವೈದ್ಯರು ಸೂಚಿಸಿದರು. ಅದರಂತೆ ಕಿಮ್ಸ್ ಮತ್ತು ಎಸ್ಡಿಎಂಸಿನಲ್ಲಿ ವಿಚಾರಿಸಿದಾಗ ವೆಂಟಿಲೇಟರ್ ಖಾಲಿ ಇಲ್ಲ ಎಂದರು.
ಬಳಿಕ ೧೦೮ ಆಂಬ್ಯುಲೆನ್ಸನಲ್ಲಿ ಗದಗ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗೆ ಅತ್ತಿಂದಿತ್ತ ಅಲೆದಾಡಿದೆ. ಯಾವುದೇ ಖಾಸಗಿ, ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ಸಿಗಲೇ ಇಲ್ಲ” ಎಂದು ಭಾವುಕರಾದರು.
ಶ್ರೀನಿವಾಸ, ಮೃತಪಟ್ಟ ಗುತ್ತಿಗೆ ನೌಕರ ಬಸವರಾಜ ಅವರ ಸಹೋದರ