ಮಂಜುನಾಥಸಿಂಗ್ ರಾಠೋಢ
ಗದಗ prajakiran.com : ೧೦ ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಡಿಒ ಒಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಗದಗ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವೀರಣ್ಣ ವಡ್ಡರ ಬಲೆಗೆ ಬಿದ್ದ ಪಿಡಿಒ.
ಮುಂಡರಗಿ ಬೃಂದಾವನ ವೃತ್ತದ ಬಳಿಯ ನಿವಾಸಿ ಚನ್ನವೀರಸ್ವಾಮಿ ಕುಮಾರಸ್ವಾಮಿ ಹಿರೇಮಠ ಅವರ ೫ ಲಕ್ಷದ ಕಾಮಗಾರಿಗೆ ೨೫ ಸಾವಿರ ಲಂಚ ನೀಡುವಂತೆ ಪಿಡಿಓ ವೀರಣ್ಣ ಬೇಡಿಕೆಯಿಟ್ಟಿದ್ದ.
ಗುತ್ತಿಗೆದಾರ ವಿನಂತಿ ಮಾಡಿಕೊಂಡ ಹಿನ್ನೆಲೆಯಲ್ಲಿ ೧೦ ಸಾವಿರಕ್ಕೆ ವ್ಯವಹಾರ ಕುದುರಿಸಿಕೊಂಡು ಹಣ ಸ್ವಿಕರಿಸುವ ವೇಳೆ ಸಿಕ್ಕಿ ಬಿದ್ದಿದ್ದಾನೆ.
ಎಸಿಬಿ ಮುಖ್ಯಸ್ಥ ವಾಸುದೇವರಾಮ್ ಎನ್ ನೇತೃತ್ವದಲ್ಲಿ ದಾಳಿ ನಡೆಸಿ ವೀರಣ್ಣನನ್ನು ವಶಕ್ಕೆ ಪಡೆದು, ೧೦ ಸಾವಿರ ಸೀಜ್ ಮಾಡಲಾಗಿದೆ.
ದಾಳಿಯಲ್ಲಿ ಎಸಿಬಿ ಇನ್ಸ್ಪೆಕ್ಟರ್ ಧರಣಾ ನಾಯಕ್, ವಿಶ್ವನಾಥ್, ಸಿಬ್ಬಂದಿಗಳಾದ ಎಂ.ಎಂ ಅಯ್ಯನಗೌಡರ್, ಆರ್ಎಚ್ ಹೆಬಸೂರು, ಎಂ.ಎನ್. ಕರಿಗಾರ, ಎನ್.ಎಸ್. ತಾಯಣ್ಣವರ್, ಈರಣ್ಣ ಜಾಲಿಹಾಳ, ವೀರೇಶ್ ಜೋಳದ ಮತ್ತು ತಾರಪ್ಪ ಇದ್ದರು.
ಹಿನ್ನಲೆ :
ಬಿದರಳ್ಳಿ ಗ್ರಾಪಂ ವ್ಯಾಪ್ತಿಯ ಮುಂಡವಾಡದ ರೈತ ಚನ್ನವೀರಸ್ವಾಮಿ ಹಿರೇಮಠ ೨೦೧೯–೨೦ರ ಸಾಲಿನಲಿ ತಮ್ಮ ಗ್ರಾಮದ ಹಳ್ಳವೊಂದರ ಹೂಳು ಎತ್ತುವ ನರೇಗಾ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದರು.
ಹಿರೇಮಠರ ಕುಟುಂಬದ ನಾಲ್ವರು ಸೇರಿ ಗ್ರಾಮದ ಹಲವಾರು ಜನರು ಈ ನರೇಗಾ ಕಾಮಗಾರಿಯಲ್ಲಿ ೧೪ ದಿನ ಕೆಲಸ ಮಾಡಿದ್ದರು. ಆದರೆ ಯಾರ ಖಾತೆಗೂ ಕೂಲಿ ಹಣವನ್ನು ಹಾಕಿರಲಿಲ್ಲ.
ಬಿದರಳ್ಳಿ ಗ್ರಾಪಂ ಪಿಡಿಒ ವೀರಣ್ಣ ಸತಾಯಿಸುತ್ತಲೇ ಬಂದಿದ್ದ. ಅಗಸ್ಟ್ ೧೦ರಂದು ಗುತ್ತಿಗೆದಾರ ಹಿರೇಮಠ ಪಿಡಿಒ ವೀರಣ್ಣನವರನ್ನು ಭೇಟಿಯಾಗಿ ಕಾಮಗಾರಿಯ ಬಿಲ್ ಬೇಗ ಮಾಡಲು ವಿನಂತಿಸಿದರು.
೫ ಲಕ್ಷದ ಕಾಮಗಾರಿಗೆ ಪಿಡಿಒ ೫ ಪರ್ಸೆಂಟ್ ಲಂಚ ಕೇಳಿದರು. ಅಷ್ಟು ಆಗಲ್ಲ, ಎಲ್ಲ ಕಾರ್ಮಿಕರ ಬಳಿ ಹಣ ಸೇರಿಸಿ ನಾಳೆ ೧೦ ಸಾವಿರ ಕೊಡುವುದಾಗಿ ಹಿರೇಮಠ ಹೇಳಿ ಬಂದು ಎಸಿಬಿ ಮೊರೆ ಹೋಗಿದ್ದರು.