ಧಾರವಾಡ prajakiran.com : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಹೆಚ್ಚು ಅಂಕ ಪಡೆದು ಧಾರವಾಡ ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಂಗಳವಾರ ಸನ್ಮಾನ ಮಾಡಿ ಶುಭ ಹಾರೈಸಿದರು.
ಹುಬ್ಬಳ್ಳಿ ಸುಕೃತಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಅರುಣ ಅಕ್ಕಿ ೬೨೦ ಅಂಕ ಮತ್ತು ಧಾರವಾಡ ಬಾಲಬಳಗ ಸೃಜನಶೀಲ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಆದಿತ್ಯ ಎಂ. ಭಟ್ ೬೨೦ ಅಂಕ ಪಡೆದಿದ್ದಾರೆ.
ಹುಬ್ಬಳ್ಳಿ ಚೇತನ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಅನನ್ಯ ಕಡಕೋಳ ೬೨೦ ಅಂಕಗಳನ್ನು ಪಡೆದಿದ್ದಾರೆ.
ಕುಂದಗೊಳ ತಾಲೂಕಿನ ಹೀರೆಹರಕುಣಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರೇಖಾ ಎಸ್.ಗುರಯ್ಯನವರ ೬೧೩ ಅಂಕಗಳನ್ನು ಪಡೆದಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಮೂರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಸೃಷ್ಟಿ ಸೊಗಲದ ೬೧೧ ಅಂಕಗಳನ್ನು ಪಡೆದಿದ್ದಾರೆ.
ಧಾರವಾಡ ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯ ವಿದ್ಯಾರ್ಥಿನಿ ತೇಜಸ್ವಿನಿ ಜೋತೆಪ್ಪನವರ ೬೧೦ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಬಳಿಕ ಮಾತನಾಡಿದ ಅವರು, ತಮ್ಮ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ನೆನಪಿಸಿಕೊಂಡು ನಾನು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ವಿಜಯಪುರ ಜಿಲ್ಲೆಗೆ ಹೆಮ್ಮೆ ಎನಿಸಿದ್ದೆ.
ಅಂದಿನಿಂದ ಉನ್ನತ ಗುರಿ ಹೊಂದಿ ಅಧ್ಯಯನ ಮಾಡುತ್ತ ಸಾಧನೆ ಮಾಡಿದೆ. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರೂ ಹಾಗೂ ಏಕಾಗ್ರತೆಯಿಂದ ಸಾಧನೆ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್. ಹಂಚಾಟೆ ಸೇರಿದಂತೆ, ಶಿಕ್ಷಣಾಧಿಕಾರಿಗಳು, ಶಿಕ್ಷಕರುಗಳು, ಸಾಧಕ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.