ಧಾರವಾಡ ಪ್ರಜಾಕಿರಣ.ಕಾಮ್ ಫೆ. 9: ಧಾರವಾಡದ ದುಮ್ಮವಾಡ ಗ್ರಾಮದ ನಿವಾಸಿ ಬಸಯ್ಯ ಹಿರೇಮಠ ಅವರ ಜಮೀನಿನ 50×0 ಜಾಗೆಯಲ್ಲಿ ತಿಂಗಳಿಗೆ ರೂ.3,250/- ರಂತೆ ಬಾಡಿಗೆ ಕೊಡುವ ಕರಾರಿನ ಮೇಲೆ ಜಿ.ಟಿ.ಎಲ್. ಟಾವರ್ ಕಂಪನಿಗೆ ಹತ್ತು ವರ್ಷಗಳ ಕಾಲ ಗುತ್ತಿಗೆ ಪಡೆದು ಟಾವರ್ ನಿರ್ಮಾಣ ಮಾಡಿತ್ತು.
ಎರಡು ವರ್ಷಗಳವರೆಗೆ ಸದರಿ ಕಂಪನಿ ದೂರುದಾರರಿಗೆ ಬಾಡಿಗೆ ಕೊಟ್ಟಿತ್ತು. ನಂತರ ಅವರು ಬಾಡಿಗೆ ಕೊಟ್ಟಿರಲಿಲ್ಲ. ಅಥವಾ ಟಾವರ್ ಕಿತ್ತುಕೊಂಡು ದೂರುದಾರರ ಜಾಗೆ ಖಾಲಿ ಮಾಡಿಕೊಟ್ಟಿರಲಿಲ್ಲ.
ಅದರಿಂದ ತನಗೆ ತೊಂದರೆಯಾಗಿ ಎದುರುದಾರರಿಂದ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ದೂರುದಾರ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಸದಸ್ಯರು ಎದುರುದಾರರು ಗುತ್ತಿಗೆ ಕರಾರಿನಂತೆ ತಿಂಗಳಿಗೆ ರೂ.3,250/- ರಂತೆ ಬಾಡಿಗೆ ಕೊಡದೇ ಮತ್ತು ಜಾಗವನ್ನು ಖಾಲಿ ಮಾಡಿಕೊಡದೇ ಗುತ್ತಿಗೆ ಕರಾರಿನ ಸಂಗತಿಗಳನ್ನು ಉಲ್ಲಂಘಿಸಿ, ಎದುರುದಾರ ಟಾವರ್ ಕಂಪನಿಯವರು ದೂರುದಾರನಿಗೆ ಮೋಸ ಮಾಡಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
2009ನೇ ಇಸವಿಯಿಂದ ಇಲ್ಲಿಯವರೆಗೆ ತಿಂಗಳಿಗೆ ರೂ.3,250/- ರಂತೆ ಟಾವರ ಅಳವಡಿಕೆಯ ಬಾಡಿಗೆ ಹಣ ರೂ.3,81,875/-ಗಳನ್ನು ಶೇ.8% ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲ, ಮಾನಸಿಕ ತೊಂದರೆ ಮತ್ತು ಹಾನಿಗಾಗಿ ರೂ.50,000/-ಗಳ ಪರಿಹಾರ ಜೊತೆಗೆ ಪ್ರಕರಣದ ಖರ್ಚು ರೂ.10,000/-ಗಳನ್ನು ಈ ಆದೇಶದ ದಿನಾಂಕದಿಂದ 30 ದಿನಗಳ ಒಳಗಾಗಿ ದೂರುದಾರರಿಗೆ ಕೊಡಲು ಎದುರುದಾರರಿಗೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ ಈ ತೀರ್ಪು ಆದ 2 ತಿಂಗಳ ಒಳಗಾಗಿ ಎದುರುದಾರರು ತಾವು ಅಳವಡಿಸಿದ ಜಿ.ಟಿ.ಎಲ್. ಟಾವರ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ತೆಗೆದುಕೊಂಡು ಹೋಗಿ ಖಾಲಿ ಜಾಗವನ್ನು ದೂರುದಾರರ ಸ್ವಾಧೀನತೆಗೆ ನೀಡುವಂತೆ ಆದೇಶಿಸಿದೆ.