ಧಾರವಾಡ prajakiran.com : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ 52 ನೇ ವರ್ಷದ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಶನಿವಾರ ಅಭಿಮಾನಿಗಳು ರಕ್ತದಾನ ಮಾಡಿ ಅವರ ಅನುಪಸ್ಥಿತಿಯನ್ನು ನೆನೆದರು.
ನಗರದ ಗಾಂಧಿ ಚೌಕನಲ್ಲಿರುವ ಲಯನ್ಸ್ ಜಿಮ್ನಲ್ಲಿ ಸರ್ಕಾರಿ ಆಸ್ಪತ್ರೆಯ ರಕ್ತದಾನ ಕೇಂದ್ರದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ರಕ್ತದಾನಕ್ಕೆ ಸಾಕ್ಷಿಯಾದರು. ಇದೇ ವೇಳೆ ಅಭಿಮಾನಿಯೊಬ್ಬರು ವಿನಯ್ ಕುಲಕರ್ಣಿ ಅವರ ಭಾವಚಿತ್ರ ಹೊಂದಿರುವ ಮುಖವಾಡ ಧರಿಸಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿರಬಹುದು. ಆದರೆ ಅವರ ಜೊತೆ ಕಾರ್ಯಕರ್ತರಿದ್ದಾರೆ. ಅವರು ಆದಷ್ಟು ಶೀಘ್ರ ಹೊರಬರಲಿದ್ದಾರೆ ಎಂದರು.
ಯೋಗೇಶ್ ಗೌಡ ಕೊಲೆ ಪ್ರಕರಣದಡಿ ಸದ್ಯ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಪ್ರತಿವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು.
ಆದರೆ ಈ ಬಾರಿ ವಿನಯ್ ಕುಲಕರ್ಣಿ ಅವರು ಸಿಬಿಐ ತನಿಖೆ ಎದುರಿಸುತ್ತಿರುವ ಹಿನ್ನೆಲೆ ಅಭಿಮಾನಿಗಳೆ ಹುಟ್ಟುಹಬ್ಬ ಆಚರಣೆ ಮಾಡಿದರು.
ಧಾರವಾಡದ ಬಾರಾಕೋಟ್ರಿಯಲ್ಲಿರುವ ಅವರ ನಿವಾಸ ಈ ಬಾರಿ ಯಾವುದೇ ಆಚರಣೆ ಇಲ್ಲದೆ ಬಣಗುಡುತ್ತಿತ್ತು.
ಅವರ ಅನುಪಸ್ಥಿತಿಯಲ್ಲಿ ಕೈ ಕಾರ್ಯಕರ್ತರು ಹುಟ್ಟು ಹಬ್ಬವನ್ನು ಹುಬ್ಬಳ್ಳಿ-ಧಾರವಾಡದ ವಿವಿಧೆಡೆ ಆಚರಿಸಿದರು.