ಧಾರವಾಡ prajakiran.com : ಧಾರವಾಡದ ಮುರುಘಾಮಠದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಅವರ ಜನ್ಮದಿನದ ಅಂಗವಾಗಿ ಧಾರವಾಡ ಮುರುಘಾಮಠದಲ್ಲಿ ಸರ್ವ ಸಮಾಜದ ಸ್ವಾಭಿಮಾನಿ ಬಳಗದಿಂದ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರುವ ಉದ್ದೇಶದಿಂದ ಜನ್ಮದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ವಿನಯ ಕುಲಕರ್ಣಿ ಸಂಬಂಧಿಯೂ ಆಗಿರುವ ಧಾರವಾಡ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ ಮಾತನಾಡುತ್ತ ಭಾವುಕರಾದರು.
ನನ್ನ ಸೋದರನ ಜನ್ಮದಿನ ಆಚರಿಸುತ್ತಿರುವ ನಿಮಗೆಲ್ಲ ಧನ್ಯವಾದ ಎನ್ನುತ್ತ ಕೈ ಮುಗಿದು ವೇದಿಕೆಯಿಂದ ನಿರ್ಗಮಿಸಿದರು.
ಈ ಸಮಾರಂಭದಲ್ಲಿ ಡಾ.ರಾಜ್ಕುಮಾರ್ ಗೀತೆ ಹಾಡುವ ಮೂಲಕ ಬಿಜೆಪಿ ವಿರುದ್ಧ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪರೋಕ್ಷ ವಾಗ್ದಾಳಿ ನಡೆಸಿದರು.
‘ಆಡಿಸಿ ನೋಡು.. ಬೀಳಿಸಿ ನೋಡು ಎಂದು ಉರುಳದು.. ವಿನಯ ನಗುತ ಇರುವನು’ ಎಂದು ಹಾಡಿದರು.
ವಿನಯ್ ಕುಲಕರ್ಣಿ ಹೊರಬಂದ ಬಳಿಕ ಈಗಿನ 10ರಷ್ಟು ಶಕ್ತಿಶಾಲಿಯಾಗ್ತಾರೆ. ಚೆಂಡು ನೆಲಕ್ಕೆ ಜೋರಾಗಿ ಪುಟಿದಷ್ಟು ಮೇಲೆ ಏಳುತ್ತದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದರು.
ಅದೇ ರೀತಿ ವಿನಯ್ ಕುಲಕರ್ಣಿ ಪ್ರಭಾವಿ ನಾಯಕರಾಗಿ ಹೊರಹೊಮ್ಮುತ್ತಾರೆ. ಸಮಾರಂಭದಲ್ಲಿ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.
ಲೇಸೆಂಬ ಪದಕ್ಕೆ ಭಾಜನರಾದ ವ್ಯಕ್ತಿ ವಿನಯ ಕುಲಕರ್ಣಿ, ಅವರ ಮನೆತನವೇ ಜೇನು ತುಪ್ಪದ ಮನೆತನ. ನೂರಾರು ವರ್ಷಗಳ ಹಿಂದೆ ಅವರ ಮನೆತನ ಮುರುಘಾಮಠಕ್ಕೆ 75 ಎಕರೆ ಜಮೀನು ನೀಡಿದೆ.
ಅವರ ಹುಟ್ಟು ಹಬ್ಬವನ್ನು ಮುರುಘಾಮಠದಲ್ಲಿ ಹಲವು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಒಂದು ಕಹಿ ವಾತಾವರಣದಲ್ಲಿ ಅವರನ್ನು ಬಂಧಿಸಲಾಗಿದೆ.
ಆ ಕಹಿ ವಾತಾವರಣದಿಂದ ಅವರನ್ನು ಸಿಹಿ ವಾತಾವಾರಣಕ್ಕೆ ಭಗವಂತನೇ ತರುತ್ತಾನೆ. ಈಗ ಮುಸುಕಿದ ಮೋಡ ಭಗವಂತನ ಕೃಪೆಯಿಂದ ಚದುರಿ ಹೋಗುತ್ತದೆ ಎಂದರು.
ಈ ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಸೇರಿದಂತೆ ಅನೇಕರು ಇದ್ದರು.