11ನೇ ದಿನ ಪೂರೈಸಿದ ಧಾರವಾಡದ ಸರಣಿ ಸತ್ಯಾಗ್ರಹ
ಹೈಕೋರ್ಟ್ ವಕೀಲ ಪಿ.ಎಚ್. ನೀರಲಕೇರಿ ನೇತೃತ್ವದಲ್ಲಿ ನಿರಂತರ ಹೋರಾಟ
ಧಾರವಾಡ prajakiran.com : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ರೈತ, ಕಾರ್ಮಿಕ ಹಾಗೂ ಜನವಿರೋಧಿ ಕಾನೂನುಗಳನ್ನು ವಿರೋಧಿಸಿ ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ರೈತ ಹಿತರಕ್ಷಣಾ ಪರಿವಾರದ ವತಿಯಿಂದ ನಡೆಯುತ್ತಿರುವ ಅನಿರ್ದೀಷ್ಟ ಸರಣಿ ಸತ್ಯಾಗ್ರಹ 11ನೇ ದಿನ ಪೂರೈಸಿದೆ.
ಬುಧವಾರ ಹಲವಾರು ರೈತರು ಮೋದಿ ಸರಕಾರದ ವಿರುದ್ದ ಭಜನೆ ಪದಗಳನ್ನು ಹಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಷಣಮುಖಪ್ಪ ಅಮರಶೆಟ್ಟಿ, ಮಾಳಪ್ಪ ಸುಣಗಾರ, ರಂಗಪ್ಪ ಭೋವಿ, ಬಸಪ್ಪ ದನದಮನಿ, ಫುಂಡಲಿಕಪ್ಪ ಕುರಿ, ಹನುಮಂತಪ್ಪ ಕಂಬಾರ, ಬಸವರಾಜ ಉಂಡೋಡಿ ಅವರ ಸಾರಥ್ಯದ
ಅಮ್ಮಿನಬಾವಿಯ ಅನ್ನದಾತರ ಭಜನಾ ಮಂಡಳಿಯ ವತಿಯಿಂದ ಹಲವು ಗಂಟೆಗಳ ಕಾಲ ನಡೆದ ಭಜನಾ ಪದಗಳು ನೆರೆದಿದ್ದವರ ಮೈ ಮನ ಪುಳಕಿತಗೊಳಿಸಿದವು.
ಅದರಲ್ಲೂ ಸೀಮಿ ಇಲ್ಲದ ಭೂಮಿಯ ಮಾಡಿ, ನೇಗಿಲ ಇಲ್ಲದ ಜಮೀನ ಮಾಡಿ, ಮನಬಂದ ಕಾನೂನು ಮಾಡಿ ಎಂಬ ಮೋದಿ ಸರಕಾರದ ನಡೆ, ನುಡಿಗಳ ಪದಗಳು ಎಲ್ಲರ ಗಮನ ಸೆಳೆದವು.
ಈ ವೇಳೆ ಮಾತನಾಡಿದ ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್. ನೀರಲಕೇರಿ, ಅವಶ್ಯಕ ವಸ್ತುಗಳು ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ಕಾಯ್ದೆ, ವಿದ್ಯುತ್ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ ಕೇಂದ್ರ ಸರಕಾರ ರಾಜ್ಯಗಳ ಮೇಲೆ ಒತ್ತಡ ತಂಡು ಬಲವಂತದಿಂದ ಜಾರಿಗೊಳಿಸಿರುವುದು ವಿಷಾದದ ಸಂಗತಿಯಾಗಿದೆ.
ನಿನ್ನೇ ಮೋದಿಯವರು ಮಾತನಾಡುತ್ತ ಕನಿಷ್ಟ ಬೆಂಬಲ ಬೆಲೆ ಹಿಂದೆಯೂ ಇತ್ತು. ಇಂದು ಇದೆ. ಮುಂದೆಯೂ ಇರಲಿದೆ ಎಂದು ಹೇಳಿರುವುದು ಅಪ್ರಯೋಜಕ. ಧಾರವಾಡ ಜಿಲ್ಲೆಯಲ್ಲಿ ಗೋವಿನ ಜೋಳಕ್ಕೆ ಕಳೆದ ವರ್ಷದ ಸೆಪ್ಟಂಬರ್ ತಿಂಗಳಲ್ಲಿಯೇ 1850ರೂ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ.
ಆದರೆ ಈವರೆಗೆ ನಾಲ್ಕು ತಿಂಗಳು ಕಳೆದರೂ ಒಂದು ಕೆ.ಜಿ ಕೂಡ ಖರೀದಿ ಆಗಿಲ್ಲ. ಜಿಲ್ಲೆಯಲ್ಲಿ ಒಂದೇ ಒಂದು ಖರೀದಿ ಕೇಂದ್ರಗಳು ಕಾರ್ಯಾರಂಭವಾಗಿಲ್ಲ. ಬದಲಿಗೆ 2 ಲಕ್ಷ ಟನ್ ಗೋವಿನ ಜೋಳ ಕೇವಲ 500- 600 ಮಧ್ಯವರ್ತಿಗಳ ಪಾಲಾಗಿದೆ ಎಂದು ದೂರಿದರು.
ಹೀಗಾಗಿ ಸರಕಾರ ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕು. ಯಾವುದೇ ವ್ಯಾಪಾರಿ ಖರೀದಿ ನಿಯಮ ಉಲ್ಲಂಘನೆ ಮಾಡಿದರೆ ಕನಿಷ್ಟ 7 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ದಂಡ ವಿಧಿಸುವಂತಾಗಬೇಕು ಎಂದು ಆಗ್ರಹಿಸಿದರು.
ದೆಹಲಿಯಲ್ಲಿ ರೈತ ಹೋರಾಟಗಾರ ರಾಕೇಶ್ ಸಿಂಗ್ ಟಿಕಾಯತ್ ಅವರು ಅಕ್ಟೋಬರ್ 2 ವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಘೋಷಿಸಿದ್ದಾರೆ. ಹೀಗಾಗಿ ಧಾರವಾಡ ಜಿಲ್ಲೆಯ ಸರಣಿ ಸತ್ಯಾಗ್ರಹ ಅಲ್ಲಿಯವರೆಗೆ ಮುಂದುವರೆಸಲಾಗುವುದು ಎಂದರು.
ಸರಣಿ ಸತ್ಯಾಗ್ರಹದಲ್ಲಿ ಅಬ್ದುಲ್ ಖಾನ್, ನರಹರಿ ಕಾಗಿನೆಲೆ, ಶ್ರೀಶೈಲ್ ಗೌಡ ಕಮತರ, ನಾಗರಾಜ ಕಿರಣಗಿ, ಸಲೀಂ ಸಂಗನಮುಲ್ಲಾ, ಲಕ್ಷ್ಮಣ ಬಕ್ಕಾಯಿ, ಸಿದ್ದಪ್ಪ ಕಳಸಣ್ಣವರ, ಸಚಿನ ಮುದರಡ್ಡಿ, ನವೀನ ಹೊಸಮನಿ, ಶಿವಾನಂದ ಬೂಬಣ್ಣವರ, ನಾರಾಯಣ ನಲವಡಿ ಸೇರಿದಂತೆ ಬಲ್ಲರವಾಡ ಹಾಗೂ ಹೆಬಸೂರ ರೈತರು ಪಾಲ್ಗೊಂಡಿದ್ದರು.