ಧಾರವಾಡ prajakiran.com : ಬಿಜೆಪಿ ಪಕ್ಷ ನೀಡಿದ ವಿಪ್ ಉಲ್ಲಂಘಿಸಿರುವ ಧಾರವಾಡ ಜಿಲ್ಲಾ ಪಂಚಾಯತನ ನಾಲ್ವರು ಬಿಜೆಪಿ ಸದಸ್ಯರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿ ಆದೇಶಿಸಿದೆ.
ಬಿಜೆಪಿಯ ಧಾರವಾಡ ಜಿಲ್ಲಾ ಪಂಚಾಯತನ ತಬಕದ ಹೊನ್ನಳ್ಳಿ ಜಿಪಂ ಸದಸ್ಯರಾದ ಮಂಜವ್ವ ಶೇಖಪ್ಪ ಹರಿಜನ, ಗಳಗಿ ಹುಲಕೊಪ್ಪ ಜಿಪಂ ಸದಸ್ಯ ಅಣ್ಣಪ್ಪ ಫಕೀರಪ್ಪ ದೇಸಾಯಿ, ಗುಡಗೇರಿ ಜಿಪಂ ಸದಸ್ಯೆ ಜ್ಯೋತಿ ಶಿವಾನಂದ ಬೆಂತೂರ ಮತ್ತು ಗರಗ ಜಿಪಂ ಸದಸ್ಯರಾದ ರತ್ನಾ ದಯಾನಂದ ಪಾಟೀಲ ಅನರ್ಹಗೊಂಡ ಸದಸ್ಯರಾಗಿದ್ದಾರೆ.
ಕಳೆದ ವರ್ಷದ ಫೆಬ್ರುವರಿ ೫ ರಂದು ಧಾರವಾಡ ಜಿಲ್ಲಾ ಪಂಚಾಯತ ಅಧ್ಯಕ್ಷೆಯಾಗಿದ್ದ ಬಿಜೆಪಿಯ ಚೈತ್ರಾ ಶಿರೂರ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಈ ನಾಲ್ವರು ಬೆಂಬಲಿಸಿದ್ದರು.
ಆ ಬಳಿಕ ಕಾಂಗ್ರೆಸ್ ಪಕ್ಷದ ವಿಜಯಲಕ್ಷ್ಮೀ ಪಾಟೀಲ ಅವರು ಜಿಪಂ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷವು ಜಿಲ್ಲಾ ಪಂಚಾಯತ ಆಡಳಿತವನ್ನು ಕೈವಶ ಮಾಡಿಕೊಂಡಿತ್ತು. ಇದರಿಂದ ಜಿಲ್ಲೆಯ ಬಿಜೆಪಿ ಮುಖಂಡರು ತೀವ್ರ ಮುಜುಗರಕ್ಕೊಳಗಾಗಿದ್ದರು.
ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿದ್ದ ಈ ನಾಲ್ವರು ಸದಸ್ಯರು ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದು, ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಅಂದಿನ ಬಿಜೆಪಿ ಜಿಲ್ಲಾಧ್ಯಕ್ಷ ಈರಣ್ಣ ಜಡಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಜಿಲ್ಲಾ ಪಂಚಾಯತ ಗದ್ದುಗೆಯಿಂದ ಕೆಳಗಿಳಿದು ಅಧಿಕಾರ ವಂಚಿತವಾಗಿದ್ದ ಬಿಜೆಪಿ, ಈ ನಾಲ್ವರು ಸದಸ್ಯರನ್ನು ಅನರ್ಹಗೊಳಿಸುವ ಕಾನೂನು ಹೋರಾಟ ಮಾಡಿತ್ತು.
ಇದೀಗ ಚುನಾವಣಾ ಆಯೋಗ ಅನರ್ಹಗೊಳಿಸಿರುವುದು ಬಿಜೆಪಿಗೆ ಗೆಲುವಿನ ನಗೆ ಮೂಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಇದು ಮುಜುಗರವುಂಟು ಮಾಡಿದೆ.