ಧಾರವಾಡ prajakiran.com : ಧಾರವಾಡದ ಕರ್ನಾಟಕ ಕಾಲೇಜು ರಸ್ತೆ ಬದಿಯಲ್ಲಿ ನಿನ್ನೆ ದುಬೈನಲ್ಲಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡದ ನಾರಾಯಣಪೂರದ ಅಕ್ಷಯ , ಶ್ರೀರಾಮನಗರದ ಮಹ್ಮದಯಾಸೀನ್ ಅಬ್ದುಲರಶೀದ ಗಬ್ಬೂರ ಮತ್ತು ಜಕಣಿಭಾವಿ ರಸ್ತೆಯ ಕಿಶೋರ ಉಮೇಶ ಪೂಜಾರಿ ಎಂಬುವರೇ ಬಂಧಿತ ಆರೋಪಿಗಳು.
ಬಂಧಿತರಿಂದ 3.46 ಲಕ್ಷ ನಗದು ಮತ್ತು ಮೂರು ಮೊಬೈಲ್ಗಳನ್ನು ದಾಳಿ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಉಪನಗರ ಠಾಣೆಯ ಸಿಪಿಐ ಪ್ರಮೋದ ಯಲಿಗಾರ ಅವರ ನೇತೃತ್ವದಲ್ಲಿ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ, ಎಎಸ್ಐ ಆರ್.ಎಚ್.ನದಾಫ್, ಸಿಬ್ಬಂದಿಗಳಾದ ಎಸ್.ಪಿ.ನಡುವಿನಮನಿ, ಚಂದ್ರು ನಡುವಿನಮನಿ, ಸಿ.ಡಿ.ಬಳ್ಳಾರಿ, ಎಸ್.ವಿ.ನೀಲಣ್ಣವರ, ಕೆ.ಎಂ.ಡೊಕ್ಕನವರ, ಆರ್.ಎಚ್.ಬಡ್ನಿ, ಪಿ.ಎಸ್.ಕುಂದಗೋಳ, ಹಿ.ಬಿ.ಭರಮಗೌಡ್ರ ದಾಳಿ ನಡೆಸಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡಅವಳಿ ನಗರದಲ್ಲಿ ವ್ಯಾಪಕವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ. ಪೊಲೀಸರು ಕ್ರಿಕೆಟ್ ಬುಕ್ಕಿಗಳ ಮೇಲೆ ಹದ್ದಿನ ಕಣ್ಣೀಟ್ಟು ಇನ್ನಷ್ಟು ಕುಳಗಳನ್ನು ಹೆಡೆಮುರಿ ಕಟ್ಟುವ ಅವಶ್ಯಕತೆಯಿದೆ.