ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಸುಶೀಲಾ ಬಿ. ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಂದ ವರ್ಗಾವಣೆಗೊಂಡಿರುವ ಡಾ.ಬಿ.ಸಿ.ಸತೀಶ ಅವರು ಅಧಿಕಾರ ಹಸ್ತಾಂತರಿಸಿದ್ದಾರೆ.
ಹೈದರಾಬಾದಿನ ಗಾಂಧಿ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿರುವ ಡಾ.ಸುಶೀಲಾ ಅವರು, ಕೆಲಕಾಲ ವೈದ್ಯಕೀಯ ವೃತ್ತಿ ನಡೆಸಿ ನಂತರ ೨೦೧೩ ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ರೇಲ್ವೆ ಸಿಬ್ಬಂದಿ ಸೇವೆಗೆ ಅರ್ಹತೆ ಪಡೆದರು. ಪುನಃ ೨೦೧೫ ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಕರ್ನಾಟಕ ಕೇಡರ್ ಗೆ ಆಯ್ಕೆಯಾದರು.
ರಾಯಚೂರಿನಲ್ಲಿ ಜಿಲ್ಲಾ ತರಬೇತಿ, ಸೇಡಂ ಹಾಗೂ ಕಲಬುರ್ಗಿಯಲ್ಲಿ ಉಪವಿಭಾಗಾಧಿಕಾರಿಯಾಗಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇದೀಗ ಬಡ್ತಿಯೊಂದಿಗೆ ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಹುದ್ದೆ ಸ್ವೀಕರಿಸಿದ್ದಾರೆ.