ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡಮಧ್ಯದ ನವಲೂರ ಬಳಿ ಬಿ.ಆರ್.ಟಿ.ಎಸ್. ಕಂಪನಿಯು ಆರಂಭಿಸಿದ ಮೇಲ್ಸೇತುವೆ ವಾಹನ ಸಂಚಾರಕ್ಕೆ ಲೋಕಾರ್ಪಣೆಗೊಳ್ಳುವ ಮೊದಲೇ ತಡೆಗೋಡೆಯ ಪ್ಯಾನಲ್ ಗಳು ಕಳಚಿ ಬಿದ್ದು, ಕಾಮಗಾರಿಗಳು ಕಳಪೆಯಾಗಿರುವುದು ಕಂಡು ಬಂದಿದೆ.
ಅದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ ಎಂದು ಎಎಪಿ ಧಾರವಾಡ ಜಿಲ್ಲಾಧ್ಯಕ್ಷ ಸಂತೊಷ ನರಗುಂದ ತಿಳಿಸಿದರು.
ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ತೆರಿಗೆ ಹಣ ಮತ್ತು ವಿಶ್ವಬ್ಯಾಂಕ್ ನಿಂದ ಸಾಲ ಪಡೆದು ಹುಬ್ಬಳ್ಳಿ ಧಾರವಾಡ ಮಧ್ಯೆ ವೇಗವಾಗಿ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಬಿ.ಆರ್.ಟಿ.ಎಸ್. ಯೋಜನೆಯನ್ನು 2012 ರಲ್ಲಿ ಅನುಷ್ಠಾನ ಮಾಡಲಾಗಿದೆ.
ಆದರೆ ಇದು ಒಂದಿಲ್ಲ ಒಂದು ಯಡವಟ್ಟು ಮಾಡುತ್ತಾ ಬಂದಿದೆ. ಇದೀಗ ನವಲೂರು ಮೇಲ್ಸೇತುವೆ ಪೂರ್ಣಗೊಳ್ಳದೇ ಕಾಮಗಾರಿಯ ಅರ್ಧಕ್ಕೆ ಸಿಮೆಂಟ್ ಗೋಡೆಗಳು ಕಳಚಿ ಬಿದ್ದಿದ್ದು, ಅದರೊಳಗಿನ ಮಣ್ಣು ಸಹ ಅಪಾರ ಪ್ರಮಾಣದಲ್ಲಿ ಕುಸಿದಿದೆ.
ಇನ್ನೂ ಕಳೆದ ವರ್ಷವಷ್ಟೇ ಧಾರವಾಡದ ನವಲೂರಿನ ಬ್ರಿಜ್ ಉದ್ಘಾಟನೆಗೆ ಮುನ್ನವೇ ಬಿರುಕು ಬಿಟ್ಟಿದ್ದರಿಂದ ಕೆಲ ದಿನಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು.
ಅಲ್ಲದೇ ಇನ್ನೊಂದು ಪೂರ್ಣಗೊಂಡ ಮೇಲ್ಸೇತುವೆ ರಸ್ತೆಯಲ್ಲಿಯೂ ಸಹ ಗುಂಡಿಗಳು ಬಿದ್ದಿವೆ. ಇದೀಗ ಅಪೂರ್ಣಗೊಂಡ ಮೇಲ್ಸೇತುವೆಯ ಸಿಮೆಂಟ್ ಪ್ಯಾನಲ್ ಗಳು ಕಳಚಿ ಬಿದಿದ್ದು, ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬುದು ಜಗ್ಗದ್ ಜಾಹೀರಾಗಿದೆ.
ಇದಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಅಸಮರ್ಪಕ ನಿರ್ವಹಣೆಯೇ ಕಾರಣ. ಎಲ್ಲಡೆ ವಿಫಲವಾದ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಬಿಆರ್ಟಿಎಸ್ ಯೋಜನೆಯನ್ನು ಬೇಡ ಎಂದರೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಂದಿದ್ದಾರೆ.
ಸಂಪೂರ್ಣ ಅವೈಜ್ಞಾನಿಕವಾದ ಯೋಜನೆಗೆ ನೂರಾರು ಕೋಟಿ ರೂಪಾಯಿ ಹಣ ಖರ್ಚು ಮಾಡಿ, ಕಳಪೆ ಕಾಮಗಾರಿ ಮಾಡುವುದು ಯಾವ ಪುರುಷಾರ್ಥಕ್ಕೆ…?
ಇಷ್ಟೇಲ್ಲಾ ಆಗುತ್ತಿದ್ದರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹುಬ್ಬಳ್ಳಿ–ಧಾರವಾಡದ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಮಾತ್ರ ತುಟಿ ಬಿಚ್ಚದೇ ಇರುವುದು ಖಂಡನೀಯ. ಮಹತ್ವದ ಯೋಜನೆಯ ಕಳಪೆ ಕಾಮಗಾರಿ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿಲ್ಲ.
ಈ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ಮಾಡಿ ಜನರಲ್ಲಿ ಆತಂಕಕ್ಕೆ ಕಾರಣವಾಗಿರುವ ನವಲೂರ ಮೇಲ್ಸೇತುವೆ ಕಳಪೆ ಕಾಮಗಾರಿ ಬಗ್ಗೆ ಆಮ್ ಆದ್ಮಿ ಪಕ್ಷ ಸಮಗ್ರ ತನಿಖೆಗೆ ಆಗ್ರಹಿಸಿ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಇದರ ಹಿಂದಿನ ರಾಜಕೀಯ ಕೊಂಡಿಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಿ ನಿರ್ದಿಷ್ಟ ಕಾಲಮಿತಿಯಲ್ಲಿ ಕಾನೂನು ಕ್ರಮ ಜರುಗಿಸುತ್ತವೆ ಎಂದು ಆಮ್ ಆದ್ಮಿ ಪಕ್ಷ ನಂಬಿಕೆ ಹೊಂದಿದೆ ಎಂದು ಎಎಪಿ ಧಾರವಾಡ ಜಿಲ್ಲಾಧ್ಯಕ್ಷ ಸಂತೊಷ ನರಗುಂದ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಎಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ನಾಗರಾಜ ಕರೆಣ್ಣವರ, ಕಾರ್ಯ ಮಂಡಳಿ ಸದಸ್ಯರಾದ ಜಯತೀರ್ಥ ಚಿಮ್ಮಳಗಿ, ನವೀನ ರಾಯ್ಕರ, ಶರೀಫಸಾಬ ಮಡಕೇಶ್ವರ್, ಶಿವಕಿರಣ ಅಗಡಿ ಇದ್ದರು.