ಧಾರವಾಡ prajakiran.com : ಜಿಲ್ಲೆಯಾದ್ಯಂತ ನಿನ್ನೇ ರಾತ್ರಿಯಿಂದ ಬಿಡುವಿಲ್ಲದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಧಾರವಾಡದಿಂದ ಸವದತ್ತಿ ಮೂಲಕ ವಿಜಯಪುರ ತಲುಪುವ ಮುಖ್ಯ ರಸ್ತೆಯಾಗಿರುವ ರಾಜ್ಯ ಹೆದ್ದಾರಿ ಬಂದ್ ಆಗಿದೆ.
ತುಪ್ಪರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿವಿಧ ಹಳ್ಳಿಗಳಿಗೆ ಹೋಗುವುದಕ್ಕಾಗಿ ಜನರು ಪರದಾಟ ನಡೆಸುವಂತಾಗಿದೆ.
ಧಾರವಾಡದ ಹಾರೂಬೆಳವಡಿ-ಸವದತ್ತಿ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆ ಕಾಮಗಾರಿ 1 ವರ್ಷವಾದರೂ ನಿರ್ಮಾಣವಾಗದ ಹಿನ್ನಲೆಯಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಜನರು ಹಿಡಿ ಶಾಪ ಹಾಕುವಂತಾಗಿದೆ.
ತುಪ್ಪರಿ ಹಳ್ಳ ತುಂಬಿ ಹರಿದರೇ ಧಾರವಾಡ ಹಾಗೂ ನವಲಗುಂದ ತಾಲೂಕಿನ ಬಹುತೇಕ ಹಳ್ಳಿಗಳ ಸಂಪರ್ಕ ಕಟ್ ಆಗಿದ್ದು, ಇತ್ತೀಚೆಗೆ ಸುರಿದ ಮಳೆಗೆ ಶಿರೂರು ಐದು ದಿನಗಳ ಕಾಲ ಸಂಪರ್ಕ ಕಡಿತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.