ಹುಬ್ಬಳ್ಳಿ prajakiran.com : ಕೆನರಾ (ಉತ್ತರಕನ್ನಡ) ಬಿಜೆಪಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಸೇರಿದಂತೆ 49 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ನಿಲ್ದಾಣದಲ್ಲಿ ಇಳಿಯದೇ, ಗಂಟೆಗೂ ಅಧಿಕ ಕಾಲ ಆಗಸದಲ್ಲಿ ಸುತ್ತಾಡಿ ಆತಂಕ ಸೃಷ್ಟಿಸಿ ನಂತರ ಸುರಕ್ಷಿತವಾಗಿ ಲ್ಯಾಂಡ್ ಆದ ಘಟನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಬೆಳಿಗ್ಗೆ ಬೆಂಗಳೂರಿನಿಂದ ಹೊರಟಿದ್ದ ಈ ವಿಮಾನವು 8.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ತೀವ್ರ ಹವಾಮಾನ ವೈಪರೀತ್ಯಗಳಿಂದಾಗಿ ಇಳಿಯಲು ಸಿಗ್ನಲ್ ದೊರೆಯದೇ ಆಗಸದಲ್ಲೇ ಸುತ್ತಾಡಿದೆ.
ಒಂದು ವೇಳೆ ಹುಬ್ಬಳ್ಳಿಯಲ್ಲಿ ವಿಮಾನ ಇಳಿಯಲು ಸಾಧ್ಯವಾಗದೇ ಹೋದಲ್ಲಿ ಗೋವಾ ಅಥವಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸುವ ಬಗ್ಗೆ ಯೋಚನೆ ಮಾಡಲಾಗಿತ್ತು.
ಆದರೆ ಸಿಗ್ನಲ್ ದೊರೆತ ಕಾರಣ 10.25ರ ವೇಳೆ ಸುರಕ್ಷಿತವಾಗಿ ಲ್ಯಾಂಡಿಂಗ್ ಸಾಧ್ಯವಾಗಿದ್ದು, ಅನಂತಕುಮಾರ ಹೆಗಡೆ ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.