ಧಾರವಾಡ prajakiran.com : ಜಿಲ್ಲೆಯಲ್ಲಿ ಲಾಕ್ ಡೌನ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಬುಧವಾರ ಧಾರವಾಡ ಸಹಜ ಸ್ಥಿತಿಗೆ ಮರಳಿದೆ.
ಜಿಲ್ಲೆಯಲ್ಲಿ ಕೋರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಲಾಗಿತ್ತು.
ಆದರೆ ನಿನ್ನೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಯಾವ ಕಡೆಗಳಲ್ಲೂ ಲಾಕ್ ಡೌನ್ ಇಲ್ಲಾ ಎಂದು ಘೋಷಿಸಿದ ಬೆನ್ನಲ್ಲೇ ಜಿಲ್ಲಾಡಳಿತ ಲಾಕ್ ಡೌನ್ ತೆರವುಗೊಳಿಸಿತ್ತು.
ಈ ಹಿನ್ನಲೆಯಲ್ಲಿ ಬುಧವಾರ ಧಾರವಾಡದಲ್ಲಿ ವಾಹನ ಸಂಚಾರ,ಬಸ್ ಸಂಚಾರಗಳು ಕೂಡ ಶುರುವಾಗಿದ್ದು, ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದು ಕಂಡು ಬಂತು.
ರೇಖೆಗಳಲ್ಲಿ ಮೂಡಿದ ವ್ಯಂಗ್ಯ ಚಿತ್ರಗಳು…
ಕೊರೊನಾ ನಿಯಂತ್ರಿಸಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್ನೊಂದಿಗೆ ಕೈ ತೊಳೆದುಕೊಳ್ಳುವುದರ ಮೂಲಕ ಎಚ್ಚರಿಕೆ ವಹಿಸಲಾಗುತ್ತಿದೆ.
ಸರ್ಕಾರವು ಕೊರೊನಾ ಕಟ್ಟಿ ಹಾಕಲು ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಜಾಗೃತಿಗೆ ಕಾರ್ಟೂನ್ ಮೂಲಕ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.
ಜಿಲ್ಲಾಡಳಿತದ ಈ ವಿನೂತನ ಪ್ರಯತ್ನಕ್ಕೆ ಗಳಗಿ-ಹುಲಕೊಪ್ಪದ ಪ್ರೌಢಶಾಲಾ ಶಿಕ್ಷಕ, ಕಲಾವಿದ ಸಂಜೀವ ಕಾಳೆ ತಮ್ಮ ಕಲಾಕುಂಚದಲ್ಲಿ ವೈವಿಧ್ಯಮಯ ವ್ಯಂಗ್ಯ ಚಿತ್ರಗಳನ್ನು ಅರಳಿಸಿ ಜನರ ಭಾವನೆಗಳನ್ನು ತಲುಪಲು ಸಹಕಾರಿಯಾಗಿದ್ದಾರೆ.
ಇನ್ನೂ ಕಲಾವಿದ ಸಂಜೀವ ಕಾಳೆ ತಮ್ಮ ಕಾರ್ಟೂನ್ ಮೂಲಕ ಕೊರೋನಾ ವೈರಸ್ ಕುರಿತು ವಿಶೇಷವಾಗಿ ಜಾಗೃತಿ ಮೂಡಿಸಿದ್ದಾರೆ.
ಕರ ಪತ್ರದ ಮೂಲಕ ಜಾಗೃತಿ…
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋರೋನಾ ಹಾವಳಿಗೆ ಕಡಿವಾಣ ಹಾಕಲು ಧಾರವಾಡ ಜಿಲ್ಲಾಡಳಿತ ನಾನಾ ಕಸರತ್ತುಗಳನ್ನು ಮಾಡುತ್ತಿದೆ.
ಈಗ ಮನೆ ಮನೆಗೆ ಹೋಗಿ ಕರಪತ್ರ ಹಂಚಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೂ ಕೂಡಾ ಕೈ ಹಾಕಿದೆ.
ನಗರದ ಹೊಸಯಲ್ಲಾಪುರ, ಜನ್ನತ್ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್ ಜಾಗೃತಿ ಕರಪತ್ರಗಳನ್ನು ವಿತರಿಸಿತು.
ಡಿಎಚ್ ಓ ಡಾ.ಯಶವಂತ ಮದೀನಕರ್, ಡಿಎಸ್ ಓ ಡಾ.ಸುಜಾತಾ ಹಸವಿಮಠ , ಡಾ.ಅರುಣಾ ಮತ್ತಿತರರು ಇದರಲ್ಲಿ ಭಾಗಿಯಾಗಿದ್ದರು.