ಧಾರವಾಡ prajakiran.com : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಒಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ-ಹಳಿಯಾಳ ರಸ್ತೆಯಲ್ಲಿನ ಮಾವಿನಕೊಪ್ಪ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಸಮೀಪದ ಎತ್ತಿನಗುಡ್ಡ ಗ್ರಾಮದ ರವಿ ಯಂಕಪ್ಪ ರುದ್ರಾಪೂರ (೨೬) ಮೃತ ಬೈಕ್ ಸವಾರ. ಘಟನೆಯಲ್ಲಿ ಬೈಕ್ ಹಿಂಬದಿಗೆ ಕುಳಿತಿದ್ದ ಅದೇ ಗ್ರಾಮದ ದೀಪಕ ಯಲ್ಲಪ್ಪ ಜಮನಾಳ ಉರ್ಫ್ ತಳವಾರ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ರಾತ್ರಿ ಸಮಯದಲ್ಲಿ ಬೈಕ್ ಮೇಲೆ ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ಆಸ್ಪತ್ರ್ರೆಗೆ ಸಾಗಿಸುತ್ತಿದ್ದಾಗ ರವಿ ರುದ್ರಾಪೂರ ಕೊನೆಯುಸಿರೆಳೆದಿದ್ದಾನೆ.
ಗಂಭೀರ ಗಾಯ: ಇದೇ ರಸ್ತೆಯಲ್ಲಿನ ಬಣದೂರ ಗ್ರಾಮದ ಬಳಿ ಬೈಕ್ಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಪ್ರಕರಣ ಗುರವಾರ ಸಂಜೆ ನಡೆದಿದೆ.
ತಾಲೂಕಿನ ಹೊಲ್ತಿಕೋಟಿ ಗ್ರಾಮದ ನಾಗರಾಜ ವಿಷ್ಣು ದಿನ್ನಿ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಹಳಿಯಾಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗರಾಜನು ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಬೈಕ್ ಮೇಲೆ ಬರುತ್ತಿದ್ದಾಗ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದೆ.
ಪ್ರಕರಣದಲ್ಲಿ ನಿಷ್ಕಾಳಿಜಿತನದಿಂದ ವಾಹನ ಚಾಲನೆ ಮಾಡಿದ ಹಳಿಯಾಳದ ಸ್ಟ್ಯಾನಿ ಸಂತಾನ ಕಿತ್ತೂರನ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಎರಡೂ ಪ್ರಕರಣಗಳು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿವೆ.