ಧಾರವಾಡ prajakiran.com : ಬಡತನದ ಮಧ್ಯೆಯೂ ಪ್ರತಿಭೆ ತೋರುವ ವಿದ್ಯಾರ್ಥಿಗಳನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಪಿ ಗೋಪಿ ಕೃಷ್ಣ ಅಭಿಪ್ರಾಯಪಟ್ಟರು.
ಅವರು ಧಾರವಾಡದಲ್ಲಿ ಶುಕ್ರವಾರ ಬಡತನದ ಮಧ್ಯೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನಸಹಾಯದ ಚೆಕ್ ಹಸ್ತಾಂತರಿಸಿ ಮಾತನಾಡಿದರು.
ಗಾಯತ್ರಿ ಹಳ್ಳಿಯವರ (ಮಾಳಮಡ್ಡಿ ಕಬ್ಬೂರ್ ಕಂಪೌಂಡಿನ ಶೆಡ್ ನಿವಾಸಿ) ನಂದಾದೇವಿ ಕಣವಿ ಮತ್ತು ಐಶ್ವರ್ಯ ಕೇಸರಗೊಪ್ಪ ಬಡತನದ ಬವಣೆ ಹಾಗೆಯೇ ಬುದ್ಧಿಮತ್ತೆಯ ಬಗ್ಗೆ ಪತ್ರಿಕೆ ಮತ್ತು ಟಿವಿಗಳಲ್ಲಿ ಬಂದ ವಿಶೇಷ ವರದಿಯನ್ನು ಗಮನಿಸಿ ಬ್ಯಾಂಕಿನ ಸಿಬ್ಬಂದಿ ವರ್ಗ ಸಹಾಯಹಸ್ತ ಚಾಚಲು ಮುಂದಾದರು ಎಂದರು.
ಈ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ರೂ. ಹತ್ತು ಸಾವಿರ ನೀಡಲಾಯಿತು. ಧನ ಸಹಾಯ ಪಡೆದ ವಿದ್ಯಾರ್ಥಿ ನಂದಾದೇವಿ ಕಣವಿ ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಧನ ಸಹಾಯ ತನ್ನ ಆತ್ಮಸ್ಥೈರ್ಯವನ್ನು ವೃದ್ಧಿಸಿದೆ.
ಉತ್ತಮ ಶಿಕ್ಷಣ ಪಡೆಯಲು ತನಗೆ ಎಲ್ಲ ಮೂಲಗಳಿಂದ ಸಹಾಯ ಒದಗಿಬರಲು ಮೂಲಕಾರಣ ಪತ್ರಿಕೆಗಳಾಗಿವೆ ಎಂದು ನುಡಿದು ಎಲ್ಲರ ಸಹಕಾರವನ್ನು ಕೃತಜ್ಞಿಸಿದರು.
ಬಡತನದೊಂದಿಗೆ ಬಿಡುವಿನ ವೇಳೆ ಕುಟುಂಬಕ್ಕೆ ಸಹಾಯಕರಾಗಿಯೂ ಕುಮರಿ ಗಾಯತ್ರಿ ಹಳ್ಳಿಯವರ ಹತ್ತನೇ ತರಗತಿಯಲ್ಲಿ ೯೧%, ಕಮಾರಿ ನಂದಾದೇವಿ ಕಣವಿ ೯೪.೭೨% ಮತ್ತು ಕುಮಾರಿ ರಕ್ಷಿತಾ ಕೋವಾಟಕರ್ ೯೮.೨೪% ಪ್ರತಿಶತ ಅಂಕಗಳಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಮಹಾಪ್ರಬಂಧಕ ಬಿ ಸಿ ರವಿಚಂದ್ರ, ಪಿ ನಾಗೇಶ್ವರ ರಾವ್, ಬ್ಯಾಂಕಿನ ಸಿಬ್ಬಂದಿ ಮನರಂಜನಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಹೆಗಡೆ , ಜಂಟಿ ಕಾರ್ಯದರ್ಶಿ ಉಲ್ಲಾಸ ಗುನಗಾ ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು .