ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿರುವ ಕರೋನಾ ಸೋಂಕು ಪ್ರತಿ ದಿನ 200 ರ ಗಡಿ ಸಮೀಪಿಸುತ್ತಲೇ ಇರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.
ಶ್ರಾವಣ ಮಾಸದ ಆರಂಭದಲ್ಲಿಯೇ ಇಂತಹ ಸಂಕಷ್ಟ, ಸವಾಲು ಎದುರಾಗಿರುವುದು ಜಿಲ್ಲೆಯ ಜನತೆಗೆ ಇದು ಬಿಗ್ ಶಾಕ್ ನೀಡಿದ್ದು, ಜನತೆ ಕಂಗಾಲಾಗಿ ಹೋಗಿದ್ದಾರೆ.
ಇದಲ್ಲದೆ, ಧಾರವಾಡ ಜಿಲ್ಲಾಡಳಿತ ಎಷ್ಟೇ ಪ್ರಯತ್ನ ಪಟ್ಟು ಇದಕ್ಕೆ ಕಡಿವಾಣ ಹಾಕಲು ಹತ್ತು ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೂಡ ಯಾವುದೇ ಪ್ರಯೋಜನ ಆಗದೆ ಇರುವುದು, ಅಧಿಕಾರಿಗಳಿಗೆ ತಲೆನೋವಾಗಿದೆ.
ಒಂದು ಕಡೆ ಅಧಿಕಾರಿಗಳು ಹೆಣಗಾಡುತ್ತಿದ್ದರೂ ಕೂಡ ಜನರು ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಅವರಿಗೆ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತಿದೆ.
ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 3553 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 1453 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನುಳಿದ 1991 ಪ್ರಕರಣಗಳು ಸಕ್ರಿಯವಾಗಿವೆ. 34 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 109 ಜನ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿನ ಬಹುತೇಕ ನಿಯೋಜಿತ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಸರಿಯಾದ ಆತ್ಮಸ್ಥೈರ್ಯ ತುಂಬುವುದಾಗಲಿ, ಅವರನ್ನು ಇಲ್ಲವೇ ಅವರ ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಕಾರ್ಯಗಳು ಆಗುತ್ತಿಲ್ಲ.
ನೆಪಕ್ಕೆ ಮಾತ್ರ ಮೂರು ಹೊತ್ತು ಗುಳಿಗೆ, ಊಟ ಕೊಟ್ಟು ಕೈ ತೊಳೆದು ಕೊಂಡರೆ ಅದಕ್ಕೆ ಚಿಕಿತ್ಸೆ ಅಂತಾರಾ ಎಂಬ ಕೂಗು ಕೇಳಿಬರುತ್ತಿದೆ.
ಅಲ್ಲದೆ, ಕರೋನಾ ಪಾಸಿಟಿವ್ ಬಂದವರನ್ನು ಒಂದು ವಾರದ ಒಳಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸುತ್ತಿರುವುದು ಸೋಂಕಿತರ ಅಕ್ಕಪಕ್ಕದ ಮನೆಯವರಿಗೆ ಹಾಗೂ ಬಡಾವಣೆ ನಿವಾಸಿಗಳ ನಿದ್ದೆಗೆಡಿಸಿದೆ.
ಇದಲ್ಲದೆ, ಮನೆ ಹತ್ತಿರ ಸೀಲ್ ಡೌನ್ ಕೂಡಾ ನಿರ್ಲಕ್ಷಕ್ಕೆ ಒಳಗಾಗಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು, ಇದನ್ನು ಯಾವ ರೀತಿ ನಿಭಾಯಿಸುತ್ತಿದ್ದಾರೆ ಎಂಬ ಪ್ರಶ್ನೆ ಎದುರಾಗುವಂತೆ ಮಾಡಿದೆ.