ಧಾರವಾಡ ತಾಲೂಕಿನ ಹೆಬ್ಬಳ್ಳಿಯಲ್ಲಿ ಮೂರನೇ ದಿನವು
ಮುಂದುವರಿದ ಹೋರಾಟ :
ಮಳೆಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಆರೋಪ
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಹೆಬ್ಬಳ್ಳಿ, ಸೇರಿದಂತೆ ವಿವಿಧ ಗ್ರಾಮದಲ್ಲಿ ಕಳೆದ ಮೂರು ತಿಂಗಳಲ್ಲಿ ಸುರಿದ ಅಪಾರ ಮಳೆಯಿಂದ ಸಾವಿರಾರು ಮನೆಗಳು ಹಾನಿಗೀಡಾಗಿವೆ.
ಆದರೆ, ರಾಜೀವ ಗಾಂಧಿ ವಸತಿ ಯೋಜನೆ ಅಡಿ ಈವರೆಗೆ ಎಲ್ಲಾ ಜನರಿಗೆ ಮನೆ ಪುನರ್ ನಿರ್ಮಾಣಕ್ಕೆ ಅನುಮೋದನೆ ನೀಡದೆ, ಕೇವಲ ಮಾತ್ರ ಅನುಮೋದನೆ ನೀಡುವ ಮೂಲಕ ಭಾರೀ ತಾರತಮ್ಯ ಎಸಗಲಾಗಿದೆ.
ಹೆಬ್ಬಳ್ಳಿ ಒಂದೇ ಗ್ರಾಮದಲ್ಲಿ 180 ಜನರಿಗೆ ಅನ್ಯಾಯವಾಗಿರುವುದು ನೋಡಿದರೆ, ಇಡೀ ಧಾರವಾಡ ತಾಲೂಕಿನಲ್ಲಿರುವ ಸಾವಿರಾರು ಜನ ಸಂತ್ರಸ್ತರಿಗೆ ಸೂರು ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ನ.5 ರಂದು ಧಾರವಾಡ ತಾಲೂಕಿನ ಹಲವಾರು ಹಳ್ಳಿಯ ನೂರಾರು ನೋಂದ ಜನರೊಂದಿಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದರು.
ಹೆಬ್ಬಳ್ಳಿ ಗ್ರಾಮದಲ್ಲಿ ಮನೆ ಹಾನಿ ಪರಿಶೀಲನೆ ಯಲ್ಲಿ ಕರ್ತವ್ಯ ಲೋಪ ಎಸಗಿರುವ ತಲಾಟಿ ಆನೆಕಿವಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು.
ಹಾಗೂ ಹಾನಿಗೀಡಾದ ಮನೆಗಳ ಪುನರ್ ಪರಿಶೀಲನೆ ನಡೆಸಿ, ಎಲ್ಲಾ ಸಂತ್ರಸ್ತರಿಗೆ ಸೂರು ಒದಗಿಸುವ ಪ್ರಾಮಾಣಿಕ ಕೆಲಸ ಧಾರವಾಡ ಜಿಲ್ಲಾಡಳಿತ ಮಾಡಬೇಕು ಆಗ್ರಹಿಸಿದರು.
ಈ ಬೇಡಿಕೆ ಈಡೇರಿಕೆಗಾಗಿ ಹೆಬ್ಬಳ್ಳಿ ಗ್ರಾಮ ಪಂಚಾಯತ್ ಎದುರು ನೂರಾರು ಗ್ರಾಮಸ್ಥರು ನಡೆಸುತ್ತಿರುವ ಹೋರಾಟ
ಎರಡನೇ ದಿನ ಪೂರೈಸಿ, ಇಂದು ಮೂರನೇ ದಿನಕ್ಕೆ ಮುಂದುವರೆದಿದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಿಸಿದರೆ ತಲಾಟಿ ಹೆಸರು ಹೇಳುತ್ತಾರೆ. ಆದರೆ ಇಲ್ಲದ ನೆಪ ಹೇಳಿ ತಲಾಟಿ ನುಣುಚಿಕೊಳ್ಳುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಕೂಡ ಹಲವಾರು ಗ್ರಾಮಸ್ಥರು ಹೆಬ್ಬಳ್ಳಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರೂ ಕೂಡ ಧಾರವಾಡ ತಹಸೀಲ್ದಾರ್ ಅಹವಾಲು ಸ್ವೀಕರಿಸಿ ಸ್ಪಂದಿಸುವ ಕೆಲಸ ಮಾಡಿಲ್ಲ. ಬದಲಿಗೆ ಉಪತಹಸೀಲ್ದಾರ್,ಕಂದಾಯ ಅಧಿಕಾರಿಯ ಜೊತೆಗೆ
ಯಾರು ತಪ್ಪಿತಸ್ಥರದಾರೋ ಅವರನ್ನು
ಪ್ರತಿಭಟನೆ ಸ್ಥಳಕ್ಕೆ ಕಳುಹಿಸಿದ್ದಾರೆ.
ಇದು ಅಧಿಕಾರಿಗಳು ನಡೆದುಕೊಳ್ಳುವ ರೀತಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರದ ಸುತ್ತೋಲೆ ಪ್ರಕಾರ ಅಕಾಲಿಕ ಮಳೆಯಿಂದ ಹಾನಿ ಸಂಭವಿಸಿದ 24 ಗಂಟೆಗಳಲ್ಲಿ ಸಂತ್ರಸ್ತರಿಗೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮೂಲಕ ಪರಿಹಾರ ನೀಡಲು ಅವಕಾಶವಿದೆ.
ಆದರೆ ಅಧಿಕಾರಿಗಳು ಸಕಾಲಕ್ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ ಇರುವುದರಿಂದ ಅನೇಕರು ಮನ ಕಳೆದುಕೊಂಡು ಬೀದಿಪಾಲಾದರೂ ಅವರು ಮನೆಯಲ್ಲಿ ವಾಸವಿಲ್ಲ. ಶೇಕಡ 15ರಷ್ಟು ಮಾತ್ರ ಕುಸಿತ ವಾಗಿದೆ ಎಂದು ಇಲ್ಲ ಸಲ್ಲದ ವರದಿ ನೀಡಿ ಕೈಚೆಲ್ಲಿದ್ದಾರೆ.
ಹೀಗಾಗಿ ಆ ಅನುದಾನ
ಸದ್ಬಳಕೆ ಆಗದೆ ನೂರಾರು ಬಡ ಹಾಗೂ ಶೋಷಿತ ಜನರಿಗೆ ಅನ್ಯಾಯ ಆಗಿದೆ. ಅನೇಕರು ಮೂರು ನಾಲ್ಕು ವರ್ಷಗಳಿಂದ ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ.
ಅವರಿಗೆ ನೀವು ಈಗಾಗಲೇ 50 ಸಾವಿರ ಪರಿಹಾರ ತೆಗೆದುಕೊಂಡಿರಿ ಎಂದು ಸುಳ್ಳು ಹೇಳಿ ಸಾಗಿ ಹಾಕುವ ಕೆಲಸ ಮಾಡುತ್ತಿದ್ದಾರೆ.
ಆದರೆ ಸರ್ಕಾರದ ಆದೇಶ ಮೂರು ವರ್ಷಗಳ ಕಾಲ ನಿರಂತರವಾಗಿ ಮನೆ ಬಿದ್ದರೂ ಪರಿಹಾರ ನೀಡಲು ಅವಕಾಶವಿದೆ. ಅದನ್ನ ಮಾಡದ ಅಧಿಕಾರಿಗಳು ಕಳೆದ ವರ್ಷ ಬಿ ಕೆಟಗೆರಿ ಇದ್ದ ಮನೆಯನ್ನು ಈ ವರ್ಷ ಸಿ ಕೆಟಗೆರಿಗೆ ತರುವುದು, ಸಿ ಕೆಟಗೆರಿ ಮನೆಯನ್ನು ಪಟ್ಟಿಯಿಂದ ಕೈ ಬಿಡುವುದು, ಉಳ್ಳವರ, ಬಲಾಡ್ಯರ, ಬೀಳದವರ, ಖಾಲಿ ನಿವೇಶನಕ್ಕೆ ಮನೆ ನಿರ್ಮಾಣಕ್ಕೆ ಅನುಮತಿ ನೀಡುವ ಕೆಲಸ ತಲಾಟಿ ಆನೆಕಿವಿ ಮಾಡಿದ್ದಾರೆ ಆರೋಪಿಸಿದರು.
ಹೀಗಾಗಿ ಇದರ ವಿರುದ್ಧ ನವೆಂಬರ್ 5 ರಂದು ಶನಿವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜನಜಾಗೃತಿ ಸಂಘದ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಲಾಗುತ್ತಿದೆ.
ತಾಲೂಕಿನ ರೈತ ಸಂಘಟನೆ, ದಲಿತ ಸಂಘರ್ಷ ಸಮಿತಿ ಬೆಂಬಲ ವ್ಯಕ್ತಪಡಿಸಿವೆ. ಇನ್ನುಳಿದ ಸಂಘ ಸಂಸ್ಥೆಗಳು, ನೊಂದವರು, ಧ್ವನಿಯೆತ್ತುವ ಮೂಲಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ ಹಾಗೂ ಬಡಜನರಿಗೆ ಯಾವುದೇ ರೀತಿಯ ತಾರತಮ್ಯ ಮಾಡದೆ ಶೀಘ್ರವಾಗಿ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ರೈತ ಸಂಘದ ರವಿರಾಜ ಕಂಬಳಿ ಉಪಸ್ಥಿತರಿದ್ದರು.