ರಾಜ್ಯ

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕುಳಿತು ಊಟ ಮಾಡಿ ಬೃಹತ್ ಪ್ರತಿಭಟನೆ ನಡೆಸಿದ ಬಸವರಾಜ ಕೊರವರ…!

ಧಾರವಾಡ ತಾಲೂಕಿನ ಹಲವು ಗ್ರಾಮದ ಮನೆ ಕಳೆದುಕೊಂಡ ಸಂತ್ರಸ್ತರು ಹೋರಾಟಕ್ಕೆ ಸಾಥ್

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದ ಹೋರಾಟಕ್ಕೆ ಶಕ್ತಿ ತುಂಬಿದ ದಲಿತ ಸಂಘರ್ಷ ಸಮಿತಿ, ರೈತ ಸಂಘ, ಜಯ ಕರ್ನಾಟಕ,
ಕರ್ನಾಟಕ ನವ ನಿರ್ಮಾಣ ಸೇನೆ

ಧಾರವಾಡ ಪ್ರಜಾಕಿರಣ. ಕಾಮ್ : ಕಳೆದ ಮೂರು ತಿಂಗಳಿಂದ ಸುರಿದ ಅಕಾಲಿಕ ಮಳೆಗೆ ಧಾರವಾಡ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಹಾನಿಗೀಡಾದ ಮನೆಗಳ ಪುನರ್ ಪರಿಶೀಲನೆ ನಡೆಸಬೇಕು. ಸೂಕ್ತ ಪರಿಶೀಲನೆ ನಡೆಸದೆ ವರದಿ ನೀಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಹಾಗೂ ಮನೆ ಕಳೆದುಕೊಂಡ ಎಲ್ಲಾ ಸಂತ್ರಸ್ಥರಿಗೆ ಮನೆಹಾನಿ ಪರಿಹಾರ ನೀಡಲು ಒತ್ತಾಯಿಸಲು
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಮೂರು ಗಂಟೆಗಳಿಗೂ ಅಧಿಕ ಕಾಲ ನೂರಾರು ಜನರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ, ಬೀದಿಯಲ್ಲಿಯೇ ಕುಳಿತು ಊಟ ಮಾಡಿ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ತಾಲೂಕಿನ ಕನಕೂರ, ಕವಲಗೇರಿ, ಹೆಬ್ಬಳ್ಳಿ, ಲೋಕೂರ, ನರೇಂದ್ರ, ತಲವಾಯಿ, ಲಕಮಾಪುರ, ಚಂದನಮಟ್ಟಿ ಸೇರಿದಂತೆ ವಿವಿಧ ಗ್ರಾಮದ ಮನೆ ಕಳೆದುಕೊಂಡ ನೂರಾರು ಸಂತ್ರಸ್ತರು ಹೋರಾಟಕ್ಕೆ ಸಾಥ್ ನೀಡಿದರು.

ಅಲ್ಲದೆ, ದಲಿತ ಸಂಘರ್ಷ ಸಮಿತಿ, ರೈತ ಸಂಘ, ಹಸಿರು ಸೇನೆ, ಜಯ ಕರ್ನಾಟಕ, ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಪ್ರತಿಭಟನೆ ಗೆ ಬೆಂಬಲ ನೀಡಿ ಜಿಲ್ಲಾಡಳಿತದ ಗಮನ ಸೆಳೆದರು.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ಎದುರು ಸೂರು ಕಳೆದುಕೊಂಡ ನೂರಾರು ಸಂತ್ರಸ್ಥರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸೂಕ್ತವಾಗಿ ಸ್ಪಂದಿಸದ ತಲಾಟಿ ಆನೆಕಿವಿ ಅವರು
ಮಳೆಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿದ್ದಾರೆ. ಹೀಗಾಗಿ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಒಂದರಲ್ಲೇ ಕಳೆದ ಅಕ್ಟೋಬರ್ ತಿಂಗಳಲ್ಲಿ ಸುರಿದ ಅಪಾರ ಮಳೆಯಿಂದ 220 ಮನೆಗಳು ಹಾನಿಗೀಡಾಗಿವೆ.

ಆದರೆ
ರಾಜೀವ ಗಾಂಧಿ ವಸತಿ ಯೋಜನೆ ಅಡಿ ಈವರೆಗೆ ಕೇವಲ 36 ಜನರಿಗೆ ಮಾತ್ರ ಅನುಮೋದನೆ ನೀಡುವ ಮೂಲಕ 180ಕ್ಕೂ ಹೆಚ್ಚು ಜನರಿಗೆ
ಭಾರೀ ಅನ್ಯಾಯ ಎಸಗಿದ್ದಾರೆ.

ಒಂದೇ ಗ್ರಾಮದಲ್ಲಿ 180 ಜನರಿಗೆ ಅನ್ಯಾಯವಾಗಿರುವುದು ನೋಡಿದರೆ, ಇಡೀ ಧಾರವಾಡ ತಾಲೂಕಿನಲ್ಲಿರುವ ಹಲವಾರು ಹಳ್ಳಿಗಳ ಸಾವಿರಾರು ಜನ ಸಂತ್ರಸ್ತರಿಗೆ ಸೂರು ನೀಡುವಲ್ಲಿ ಧಾರವಾಡ ಜಿಲ್ಲಾಡಳಿತ ಹಾಗೂ ತಾಲೂಕಿನ ಆಡಳಿತ ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಹಲವಾರು ಹಳ್ಳಿಯ ನೂರಾರು ನೋಂದ ಜನರೊಂದಿಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ.

ಒಂದುವಾರದೊಳಗೆ ಧಾರವಾಡ ತಾಲೂಕಿನ ಎಲ್ಲಾ ಹಳ್ಳಿಗಳ ಮನೆ ಹಾನಿ ಪುನರ್ ಪರಿಶೀಲನೆ ನಡೆಸಬೇಕು. ಕರ್ತವ್ಯ ಲೋಪ ಎಸಗಿರುವ ತಪ್ಪತಸ್ಥ ಅಧಿಕಾರಿಗಳನ್ನು ಹೊರಗಿಟ್ಟು ಪ್ರತ್ಯೇಕ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಜನಜಾಗೃತಿ ಸಂಘ ದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿ, ಸರಕಾರದ ಸುತ್ತೋಲೆ ಪ್ರಕಾರ ಅಕಾಲಿಕ ಮಳೆಯಿಂದ ಹಾನಿ ಸಂಭವಿಸಿದ 24 ಗಂಟೆಗಳಲ್ಲಿ ಸಂತ್ರಸ್ತರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮೂಲಕ ಪರಿಹಾರ ನೀಡಲು ಅವಕಾಶವಿದೆ. ಆದರೆ ಅಧಿಕಾರಿಗಳು ಸಕಾಲಕ್ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ ಇರುವುದರಿಂದ ಅನೇಕರು ಮನ ಕಳೆದುಕೊಂಡು ಬೀದಿಪಾಲಾಗಿ ವರ್ಷಗಳು ಕಳೆದರೂ ಅವರು ಮನೆಯಲ್ಲಿ ವಾಸವಿಲ್ಲ. ಶೇಕಡ 15ರಷ್ಟು ಮಾತ್ರ ಕುಸಿತ ವಾಗಿದೆ ಎಂದು ಇಲ್ಲ ಸಲ್ಲದ ವರದಿ ನೀಡಿ ಕೈಚೆಲ್ಲಿದ್ದಾರೆ. ಹೀಗಾಗಿ 
ಅನೇಕರು ಮೂರು ನಾಲ್ಕು ವರ್ಷಗಳಿಂದ ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ.

ಅವರಿಗೆ ನೀವು ಈಗಾಗಲೇ 50 ಸಾವಿರ ಪರಿಹಾರ ತೆಗೆದುಕೊಂಡಿರಿ ಎಂದು ಸುಳ್ಳು ಹೇಳಿ ಸಾಗಿ ಹಾಕುವ ಕೆಲಸ ಮಾಡುತ್ತಿದ್ದಾರೆ.

ಆದರೆ ಸರ್ಕಾರದ ಆದೇಶ ಮೂರು ವರ್ಷಗಳ ಕಾಲ ನಿರಂತರವಾಗಿ ಮನೆ ಬಿದ್ದರೂ ಪರಿಹಾರ ನೀಡಲು ಅವಕಾಶವಿದೆ. ಅದನ್ನ ಮಾಡದ ಅಧಿಕಾರಿಗಳು ಕಳೆದ ವರ್ಷ ಬಿ ಕೆಟಗೆರಿ ಇದ್ದ ಮನೆಯನ್ನು ಈ ವರ್ಷ ಸಿ ಕೆಟಗೆರಿಗೆ ತಂದು, ಸಿ ಕೆಟಗೆರಿ ಮನೆಯನ್ನು ಪಟ್ಟಿಯಿಂದ ಕೈ ಬಿಡುವುದು, ಉಳ್ಳವರ, ಬಲಾಡ್ಯರ, ಬೀಳದವರ, ಖಾಲಿ ನಿವೇಶನಕ್ಕೆ ಮನೆ ನಿರ್ಮಾಣಕ್ಕೆ ಅನುಮತಿ ನೀಡುವ ಕೆಲಸ ತಲಾಟಿಗಳು ಮಾಡಿದ್ದಾರೆ ಎಂದು ಆರೋಪಿಸಿದರು ‌

ಬಡಜನರಿಗೆ ಯಾವುದೇ ರೀತಿಯ ತಾರತಮ್ಯ ಮಾಡದೆ ಶೀಘ್ರವಾಗಿ ಮನೆಕಳೆದುಕೊಂಡ ಪ್ರತಿಯೊಬ್ವರಿಗೂ ವಿಳಂಬ ಮಾಡದೆ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ರಾಜ್ಯ ರೈತ ಸಂಘ, ಹಸಿರು ಸೇನೆಯ ಮಡಿವಾಳಪ್ಪ ಬೆಳವಲದ, ರವಿರಾಜ ಕಂಬಳಿ,ದಲಿತ ಸಂಘರ್ಷ ಸಮಿತಿಯ
ಲಕ್ಷ್ಮಣ ದೊಡ್ಡಮನಿ, ನಾರಾಯಣ ಮಾದರ, ಹನುಮಂತ ಮೊರಬ,
ಯ ಕರ್ನಾಟಕ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಗಿರೀಶ ಪೂಜಾರ, ಕನಕೂರಿನ ತುಕಾರಾಮ್ ಶಿಂಧೆ, ಹನುಮಂತಪ್ಪ ಉಪ್ಪಾರ, ಹೆಬ್ಬಳ್ಳಿ ಗ್ರಾಮದ ಪಂಚಾಯತ್ ಸದಸ್ಯ ಬಸಣ್ಣ ಹೆಬ್ಬಾಳ, ಬಸಣ್ಣ ಕೊಪ್ಪದ, ಮಹೇಶ ಕಿಲಿಕೋಡ, ಹಟೇಲ್ ಸಾಬ ಗುಡಿಸಲಮನಿ,
,ನಿಂಗಪ್ಪ ಬಡಿಗೇರ, ಶೇಖಪ್ಪ ಹಡಪದ, ಕವಲಗೇರಿಯ ರಾಜು ಕವಳಿ, ಗುರಪ್ಪ ಕವಳಿ, ಮುದುಕಪ್ಪ ಬ್ಯಾಲಣ್ಣವರ ಸೇರಿದಂತೆ ಅನೇಕ ಗ್ರಾಮಸ್ಥರು ಪ್ರತ್ಯೇಕವಾಗಿ 200 ಕ್ಕೂ ಹೆಚ್ಚು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಅಪರ್ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಪುನರ್ ಪರಿಶೀಲನೆ ನಡೆಸುವ ಜೊತೆಗೆ ತಲಾಟಿ ಆನೆಕಿವಿಯ ವಿರುದ್ದ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *