ಬೆಂಗಳೂರು prajakiran.com ಫೆ 10: ಶಾಲಾ ಕಾಲೇಜುಗಳಲ್ಲಿ ವಸ್ತ್ರಸಂಹಿತೆಗೆ ಸಂಬಂಧಿಸಿದಂತೆ ಯಾವುದೇ ಶಾಂತಿ ಕದಡುವ ವಿಚಾರಗಳನ್ನು ಮಾತನಾಡದೇ ನಮಗೆ ನಾವೇ ನಿಯಂತ್ರಣ ಹಾಕಿಕೊಳ್ಳೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
‘ಶಾಲೆಗಳಲ್ಲಿ ಸಮವಸ್ತ್ರದ ಬಗ್ಗೆ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆಯಾಗಿದೆ.
ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಹೊರಗಿನವರು ಪ್ರಚೋದನೆ ನೀಡಿದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಡೆದುಕೊಳ್ಳುವುದು ಎಲ್ಲಾ ಸಂಘಟನೆಗಳ ಕರ್ತವ್ಯ.
ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಕಾಯೋಣ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯದ ತೀರ್ಪಿಗೆ ನಾವೆಲ್ಲರೂ ಗೌರವಕೊಡಬೇಕು. ಶಾಂತಿಯುತ ವಾತಾವರಣ ನೆಲೆಸಬೇಕು.
ಸಮಸ್ಯೆಗೆ ನ್ಯಾಯಾಲಯದಲ್ಲಿ ಪರಿಹಾರ ಸಿಗಲು ಸಾಧ್ಯವಿದೆ. ನೀಡಬೇಕಿರುವ ಹೇಳಿಕೆಗಳನ್ನು ಎಲ್ಲರೂ ಈಗಾಗಲೇ ನೀಡಿದ್ದಾರೆ. ಕೋರ್ಟಿನ ತೀರ್ಪಿಗೆ ಕಾಯೋಣ’ ಎಂದು ಮನವಿ ಮಾಡಿದರು.
*ಮಕ್ಕಳ ವಿಚಾರದಲ್ಲಿ ಸಂವೇದನಾಶೀಲರಾಗಿರಬೇಕು*:
ಎರಡೂ ಕಡೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ. ಮಕ್ಕಳ ವಿಚಾರದಲ್ಲಿ ಸಂವೇದನಾಶೀಲರಾಗಿರಬೇಕು. ನ್ಯಾಯಾಲಯದಲ್ಲಿರುವುದರಿಂದ ಅದರ ತೀರ್ಪಿಗೆ ಬದ್ದರಾಗೋಣ ಎಂದರು.