ಕಲಬುರಗಿ prajakiran. com : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರ ತನಿಖೆ ಮುಂದುವರೆದಿದೆ.
ಪಿ ಎಸ್ ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮಹಿಳಾ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ರಚನಾ ಹನುಮಂತ ವಿರುದ್ದ ಕಳೆದ ಮೂರುವರೆ ತಿಂಗಳ ಹಿಂದೆ ದೂರು ದಾಖಲಾಗುತ್ತಿದ್ದಂತೆ ಆಕೆ ತಲೆಮರೆಸಿಕೊಂಡು ಅಲೆದಾಡುತ್ತಿದ್ದಳು.
ಆಕೆಯ ಬಂಧನಕ್ಕೆ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್ ನೇತೃತ್ವದ ತಂಡ ಹಲವು ಕಡೆ ನಿರಂತರವಾದ ಬಲೆ ಬೀಸಿದ್ದರು.
ಆದರೂ ಅವರು ನೆರೆ ರಾಜ್ಯವಾದ ಮಹಾರಾಷ್ಟ್ರದ ಸೊಲ್ಲಾಪುರ ಸೇರಿದಂತೆ ವಿವಿಧ ಕಡೆ ಕುಟುಂಬದ ಸದಸ್ಯರ ಜೊತೆಗೆ ಸ್ಥಳ ಬದಲಿಸಿಕೊಂಡು ಅಲೆದಾಡುತ್ತಿದ್ದರು ಎನ್ನಲಾಗಿದೆ.
ಆದರೆ,ಕೊನೆಗೂ ಮೂರುವರೆ ತಿಂಗಳ ಬಳಿಕ ಸಿಐಡಿ ಪೊಲೀಸರ ಬಲೆಗೆ ಕಲಬುರಗಿ ಜಿಲ್ಲೆಯ ಆಳಂದ ಚೆಕ್ ಪೋಸ್ಟ್ ಬಳಿ ಬಲೆಗೆ ಬಿದ್ದಿದ್ದಾರೆ.
ಇವರನ್ನು ತಕ್ಷಣವೇ ವಶಕ್ಕೆ ತೆಗೆದುಕೊಂಡ ಸಿಐಡಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಆನಂತರ ಹೆಚ್ಚಿನ ವಿಚಾರಣೆ ಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋದರು ಎಂದು ತಿಳಿದುಬಂದಿದೆ.
ರಚನಾ ಹನುಮಂತ ಅವರು ಓ ಎಂ ಆರ್ ಶೀಟ್ ತಿದ್ದುಪಡಿ ಗಾಗಿ ಲಕ್ಷಾಂತರ ರೂಪಾಯಿ ನೀಡಿದ್ದ ಆರೋಪ ಕೇಳಿ ಬಂದಿತ್ತು.
ಇದೀಗ ಆಕೆಯ ಬಂಧನದಿಂದ ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ಓ ಎಂ ಆರ್ ಶೀಟ್ ತಿದ್ದುಪಡಿ ಕುರಿತು ಇನ್ನಷ್ಟು ರೋಚಕ ಮಾಹಿತಿ ಹೊರಬೀಳಲಿದೆಯೇ ಎಂಬುದು ಕಾದು ನೋಡಬೇಕಿದೆ.