ಮಂಗಳೂರು prajakiran. com, ಏ 12 :
ರಾಜ್ಯದಲ್ಲಿ ಸಾಮರಸ್ಯ ಹಾಗೂ ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ದಕ್ಷತೆಯಿಂದ ನಿರ್ವಹಿಸುತ್ತಿದೆ. ನಿಷ್ಪಕ್ಷಪಾತವಾದ ಕ್ರಮಗಳನ್ನು ನಿಷ್ಟುರವಾಗಿ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು.
ಅವರು ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿದರು.
ದೇವಸ್ಥಾನಗಳ ಬಳಿ ಅನ್ಯಧರ್ಮೀಯರ ವ್ಯಾಪಾರಗಳಿಗೆ ನಿಷೇದ ರಾಜ್ಯದೆಲ್ಲೆಡೆ ಹಾಗೂ ದೇಶದೆಲ್ಲೆಡೆ ಹಬ್ಬುತ್ತಿದ್ದು, ಕೆಲವು ಸಂಘಟನೆಗಳಿಂದ ಮುಖ್ಯಮಂತ್ರಿಗಳ ವರ್ಚಸ್ಸು ಹಾಳಾಗುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಕರಾವಳಿ ಪ್ರದೇಶದಲ್ಲಿ ಹಲವು ಅಹಿತಕರ ಘಟನೆಗಳು ನಡೆದಿದೆ. ಯಾವ ಸಂಘಟನೆಯಾಗಲಿ, ಕೋಮು ಪ್ರಚೋದನೆಯಾಗಲಿ ಮಾಡಿದರೆ ಸರ್ಕಾರ ಕಠಿಣ ಕಾನೂನು ಕ್ರಮ ತೆಗೆದುಕೊಂಡಿದ್ದೇವೆ.
ಮೊನ್ನೆ ನಡೆದ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಅಂಗಡಿ ಮೇಲೆ ದಾಳಿ, ಶಿವಮೊಗ್ಗ ಕೊಲೆ ಪ್ರಕರಣ, ಕೋಲಾರ ಪ್ರಕರಣಗಳಾಗಿದ್ದು, ಸರ್ಕಾರದ ಕಾನೂನು ಕ್ರಮ ಏಕಪಕ್ಷಿಯವಾಗಿರುವುದಿಲ್ಲ್ಲ ಎಂದರು.
*ಪ್ರಾಮಾಣಿಕ ಹಾಗೂ ಪಾರದರ್ಶಕ ತನಿಖೆ:*
ಗುತ್ತಿಗೆದಾರ ಸಂತೋಷ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಯಿಸಿ, ಪ್ರಾಥಮಿಕ ಮಾಹಿತಿಯ ಪ್ರಕಾರ ಉಡುಪಿಯ ಲಾಡ್ಜ್ ನಲ್ಲಿ ಅವರ ದೇಹ ಪತ್ತೆಯಾಗಿದೆ. ಎಫ್ಎಸ್ಎಲ್ ಹಾಗೂ ಪೊಲೀಸ್ ತನಿಖೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ತನಿಖೆಗೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ತನಿಖೆಯಲ್ಲಿ ಸತ್ಯ ಹೊರಗೆ ಬರಲಿದೆ. ವ್ಯವಸ್ಥಿತ ತನಿಖೆ, ಸ್ಥಳದ ಪರಿಶೀಲನೆ, ಎಫ್ ಎಸ್ ಎಲ್ ತನಿಖೆ, ಕಾನೂನುಬದ್ಧವಾದ ಶೀಘ್ರ ತನಿಖೆ ಪ್ರಾಮಾಣಿಕ ಹಾಗೂ ಪಾರದರ್ಶಕ ತನಿಖೆಯಾಗಬೇಕು ಎಂಬ ಸೂಚನೆಯನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.
*ತನಿಖೆಯಿಂದ ಸತ್ಯ ಹೊರಬರಲಿ :*
ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಆರೋಪ ಬಂದಿರುವ ಬಗ್ಗೆ ಪ್ರತಿಕ್ರಯಿತಿಸಿ, ಆರೋಪವನ್ನು ಕೆ.ಎಸ್.ಈಶ್ವರಪ್ಪ ರವರು ನಿರಾಕರಣೆ ಮಾಡಿದ್ದಾರೆ. ಅವರು ಆರೋಪದ ಮಾಹಿತಿಯನ್ನು ಸರ್ಕಾರಕ್ಕೆ ಕೊಟ್ಟಿಲ್ಲ.
ಕೇವಲ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದಾರೆ.ಅದಕ್ಕಾಗಿ ಸಚಿವರು ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ತಿಳಿಸಿದರು.
ರಾಜಕೀಯ ನಾಯಕರ ಈಗಿನ ಘಟನೆಗಳ ಬಗ್ಗೆ ಹೇಳಿಕೆ ನೀಡುವವರು, ಹಿಜಾಬ್ ಪ್ರಕರಣವನ್ನು ಎತ್ತಿದವರು ಯಾರು, ಇದರ ಬಗ್ಗೆ ಇವರು ಧ್ವನಿ ಎತ್ತಲಿಲ್ಲ.
ಕೆಲವೇ ವಿಷಯಗಳನ್ನು ಆಯ್ದುಕೊಂಡು ಹೇಳಿಕೆ ನೀಡುವ ಮೂಲಕ ಪ್ರಚೋದನೆ ನೀಡಿದಂತಾಗುತ್ತದೆ. ಶಾಂತಿ, ಸುವ್ಯವಸ್ಥೆ ಹಾಗೂ ಸಾಮರಸ್ಯ ಕಾಪಾಡಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
*ಭಾಜಪ ಪಕ್ಷ ಸಂಘಟನೆ:*
16 ಹಾಗೂ 17 ರಂದು ಆಗುವ ಕಾರ್ಯಕಾರಿಣಿ ಸಭೆಯ ಮುಂಚೆ ಬೂತ್ ಮಟ್ಟದ ಸಮಿತಿ, ಮೋರ್ಚಾ ಹಾಗೂ ಪ್ರಕೋಷ್ಟಗಳ ರಚನೆ ಸೇರಿದಂತೆ ಹಲವಾರು ಸಂಘಟನಾತ್ಮಕ ಗುರಿಗಳನ್ನು ಜಿಲ್ಲೆಗಳಿಗೆ ನೀಡಲಾಗಿದ್ದು,. ಕಾರ್ಯಕರ್ತರ ಶಿಸ್ತು, ಬದ್ಧತೆಯಿಂದ ಕರಾವಳಿ ಭಾಗದಲ್ಲಿ ಪಕ್ಷ ದಿನೇದಿನೇ ಬಲಿಷ್ಟವಾಗುತ್ತಿದೆ.
ಮುಂದಿನ ದಿನಗಳಲ್ಲಿ ಎಲ್ಲ ಚುನಾವಣೆಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಭಾಗದಲ್ಲಿ ಭಾಜಪ ಜಯಭೇರಿಯನ್ನು ಬಾರಿಸಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
*ಸರ್ಕಾರದ ಅಭಿವೃದ್ಧಿಯೇ ಚುನಾವಣೆಗೆ ಆಧಾರ:*
ಪಕ್ಷ ಸಂಘಟನೆ ಹಿಂಧುತ್ವ ಆಧಾರದಲ್ಲಿ ಆಗುತ್ತದೆಯೋ ಅಥವಾ ಸರ್ಕಾರದ ಅಭಿವೃದ್ಧಿ ಆಧಾರದ ಮೇಲೆ ಆಗುತ್ತದೆಯೋ ಎಂಬುದಕ್ಕೆ ಪ್ರತಿಕ್ರಯಿಸಿ, ನಮ್ಮ ಸರ್ಕಾರದ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಯನ್ನು ಎದುರಿಸುತ್ತದೆ. ಮೀನುಗಾರರ ಅಭ್ಯುದಯ,ಸಮುದಾಯಾಗಳಿಗೆ ಸಹಾಯ, ಪ್ರವಾಸೋದ್ಯಮ, ಕೈಗಾರಿಕೆಗಳ ಬಗ್ಗೆ ಚರ್ಚೆ. ಪಕ್ಷ ಹಾಗೂ ಕಾರ್ಯಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.