*ಯುಪಿಎ ಹೆಸರು ಕೇಳಿದ್ರೇ ಜನ ಛೀ ಥೂ ಅಂತ ಉಗೀತಾರೆ, ಅದಕ್ಕೆ ಯುಪಿಎ ಮತ್ರಿಕೂಟದ ಹೆಸರೇ ಬದಲಿಸಿದ್ದಾರೆ : ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ*
ಹುಬ್ಬಳ್ಳಿ ಪ್ರಜಾಕಿರಣ.ಕಾಮ್ ಆ. 27 : ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಭ್ರಷ್ಟಾಚಾರದ ರಕ್ತಬೀಜಾಸುರರೇ ತುಂಬಿರುವ ಪಕ್ಷ ಕಾಂಗ್ರೆಸ್. ಈ ಹಿಂದೆ ಇದ್ದ ಯು.ಪಿ.ಎ ಮೈತ್ರಿಕೂಟದ ಹೆಸರು ಕೇಳಿದರೆ ಜನ ಛೀ.. ಥೂ ಅಂತ ಉಗೀತಾರೆ ಅಂತ ಈಗ ಇಂಡಿಯಾ ಅಂತ ಹೆಸರು ಬದಲಿಸಿಕೊಂಡಿದ್ದಾರೆ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಹಗರಣಗಳ ತನಿಖೆಯನ್ನ ಅವರು ಮಾಡ್ಲಿ, ನೇರವಾಗಿ ಎಫ್ಐಆರ್ ಮಾಡ್ಲಿ ಏನೂ ತಕಾರಾರಿಲ್ಲ, ಆದರೆ ಆಯೋಗದ ಮುಖ್ಯಸ್ಥರ ಸ್ಥಾನದಲ್ಲಿ ನಿವೃತ್ತ ನ್ಯಾಯಮೂರ್ತಿಗಳಿದ್ದಾರೆ.
ದಿನ ಬೆಳಗಾದರೆ ಅವರ ಕೆಲಸ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಬಯ್ಯೋದು, ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಬಿಜೆಪಿ ವಿರೋಧಿ ನಿವೃತ್ತ ನ್ಯಾಯಾಧೀಶರಿಗೆ ತನಿಖೆಯ ಜವಾಬ್ದಾರಿ ವಹಿಸಿ ಬಿಜೆಪಿಗೆ ಬೈಯಿಸುವ ಕೆಲಸ ಮಾಡುತ್ತಿದ್ದಾರೆ.
ಜನ ಇದನ್ನ ನೋಡ್ತಾ ಇದ್ದಾರೆ. ಇಡೀ ದೇಶದಲ್ಲಿ ನೆಹರು ಕಾಲದಿಂದ ನಿರಂತರವಾಗಿ ಭ್ರಷ್ಟಾಚಾರ ಮಾಡಿದಂತವರು ಕಾಂಗ್ರೆಸ್ ನಾಯಕರು.
ಈಗ ನಡೀತಿರೋ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳ್ತಾ ಇದ್ದಾರೆ. ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ ಅಂತ ಅವರು ಹೇಳಿದ್ದಾರೆ.
ಬಸವರಾಜ ರಾಯರೆಡ್ಡಿ ಅವರು ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಅಂತ ಹೇಳಿದ್ದಾರೆ. ಇದನ್ನೆಲ್ಲಾ ಕಾಂಗ್ರೆಸ್ ನಾಯಕರು ಮೊದಲು ನೋಡಿಕೊಳ್ಳಲಿ ಅಂತ ಕಾಂಗ್ರೆಸ್ಸಿಗರ ವಿರುದ್ಧ ಪ್ರಲ್ಹಾದ ಜೋಶಿಯವರು ಹರಿಹಾಯ್ದರು.
ಇನ್ನು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಹೆಸರನ್ನು ಯು.ಪಿ.ಎ ಎಂದು ಬದಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು UPA ಮೈತ್ರಿ ಕೂಟದ ಹೆಸರನ್ನ ಯಾಕೆ ಚೇಂಜ್ ಮಾಡಿದ್ರು ಅಂತ ಲೆಕ್ಕ ಹಾಕ್ತಾ ಇದ್ವಿ, ಅಂಗಡಿ, ಫ್ಯಾಕ್ಟರಿಗಳಲ್ಲಿ ಪ್ರೊಡಕ್ಟ್ ಅದೇ ಇರುತ್ತೆ
ಆದರೆ ಕೆಟ್ಟ ಬ್ರಾಂಡ್ ಎಂಬ ಹಣೆಪಟ್ಟಿ ಬಂದ ಮೇಲೆ ಅದೇ ಪ್ರಾಡಕ್ಟ್ ನ ಹೆಸರು ಮಾತ್ರ ಬದಲಾಯಿಸುತ್ತಾರೆ,
ಈಗ ಕಾಂಗ್ರೆಸ್ ನಾಯಕರು ಯುಪಿಎ ಮೈತ್ರಿಕೂಟದ ಹೆಸರು ಬದಲಿಸಿರೋದು ಕೂಡ ಇದೇ ರೀತಿ ಆಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಭಾಷಣದ ವೇಳೆ ” UPA ಕಾಲದಲ್ಲಿ 12 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು, ಭ್ರಷ್ಟಾಚಾರ ಆಗಿದೆ,
ಅಷ್ಟು ಲೆಕ್ಕ ಮಾಡಿದ ಮೇಲೆ ಸಾಕಾಗಿ ನಾನೇ ಲೆಕ್ಕ ನಿಲ್ಲಿಸಿಬಿಟ್ಟೆ” ಎಂದಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಬೇರೆ ದೇಶದಿಂದ ವೀಸಾ ತಗೊಂಡು ಒಳಗೆ ಬರಬೇಕು
ಅಂದ್ರೆ ಕಾನ್ಸುಲೆಟ್ ನಲ್ಲಿ ಕೂಡ ದುಡ್ಡು ತಗೋತಾರೆ ಎಂಬ ಆರೋಪ ಇತ್ತು. ಹೀಗೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ ಕಾಂಗ್ರೆಸ್ ನಾಯಕರು ಈಗ ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮಾತಾಡ್ತೀರಾ..?
ಸ್ವತಃ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೇಲ್ ಮೇಲೆ ಹೊರಗಿದ್ದಾರೆ, ರಾಜ್ಯ ಕಾಂಗ್ರೆಸ್ ನಾಯಕರ ತನಿಖಾಸ್ತ್ರ ದ್ವೇಷ ರಾಜಕೀಯಕ್ಕೆ ಹಿಡಿದ ಕೈಗನ್ನಡಿ ಎಂದು ಕೈ ನಾಯಕರನ್ನು ಜೋಶಿ ತರಾಟೆಗೆ ತೆಗೆದುಕೊಂಡರು.
ಇನ್ನು ಚಂದ್ರಯಾನದ ಯಶಸ್ಸಿನ ಬಗ್ಗೆ ಮಾತನಾಡಿದ ಜೋಶಿ, ಚಂದ್ರಯಾನದ ಯಶಸ್ಸು ದೇಶದ ಯುವಜನರ ಉತ್ಸಾಹ ಇಮ್ಮಡಿಗೊಳಿಸಿದೆ.
ಈಗ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿರುವ ಭಾರತ 2047ರ ಹೊತ್ತಿಗೆ ಸ್ವತಂತ್ರ ಬಂದು ನೂರು ವರ್ಷ ಆಗುವ ಸಂದರ್ಭದಲ್ಲಿ ವಿಕಾಸಿತ ದೇಶವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಂದ್ರನ ದಕ್ಷಿಣ ದ್ರುವದಲ್ಲಿ ಮೊದಲ ಬಾರಿಗೆ ನಮ್ಮ ಚಂದ್ರಯಾನ3 ಅಂತರಿಕ್ಷ ನೌಕೆ ಯಶಸ್ವಿಯಾಗಿ ಲ್ಯಾಂಡ್ ಆದ ನಂತರ ಜಗತ್ತಿನಲ್ಲೇ ಭಾರತದ ಹಿರಿಮೆ ಹೆಚ್ಚಾಗಿದೆ.
ಇಸ್ರೋ ವಿಜ್ಞಾನಿಗಳಿಗೆ ಇದಕ್ಕಾಗಿ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.350ಕ್ಕೂ ಹೆಚ್ಚು ಉಪಗ್ರಹಗಳು ಲಾಂಚ್ ಆಗಿವೆ. ನಾವು ಪ್ರಪಂಚದ 5ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದ್ದೇವೆ ಎಂದರು.