*ಕೆ ಐ ಎ ಡಿ ಬಿ ಬಹುಕೋಟಿ ಹಗರಣ : 10 ನೇ ಆರೋಪಿ ಬಂಧನಕ್ಕೆ ಕ್ಷಣಗಣನೆ*
*ಅಶ್ಪಕ್ ದುಂಡಸಿ ಬಣ್ಣದ ಮಾತಿಗೆ ಮರಳಾದ ಅಧಿಕಾರಿ ಬಲೆಗೆ ಸಿಐಡಿ ಖೆಡ್ಡಾ*
*ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕರ ತಳವಾರ*
ಧಾರವಾಡ ಪ್ರಜಾಕಿರಣ.ಕಾಮ್ : ಕೆ ಐ ಎ ಡಿ ಬಿ ಬಹುಕೋಟಿ ಹಗರಣದ ಕಿಂಗ್ ಪಿನ್ ಮೆಹಬೂಬ್ ಅಲಿಯಾಸ್
ಅಶ್ಫಕ್ ಅಲ್ಲಾಭಕ್ಷ ದುಂಡಸಿಯ ಬಂಧನದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳ ತಂಡ ಕೋಟಿ ಕೋಟಿ ಅಕ್ರಮ ಆಸ್ತಿ ಪಾಸ್ತಿ ಮಾಡಿದ್ದ ಕೆ ಐ ಎ ಡಿ ಬಿ ಅಧಿಕಾರಿ ಶಂಕರ್ ತಳವಾರ ಬಂಧನಕ್ಕೆ ಖೆಡ್ಡಾ ತೋಡಿದೆ.
ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈಗಾಗಲೇ ಸಿಐಡಿ ಅಧಿಕಾರಿಗಳ ವಶದಲ್ಲಿರುವ ಶಂಕರ ತಳವಾರ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವ ಹಿನ್ನೆಲೆಯಲ್ಲಿ ಈ ಹಿಂದೆ ಕೂಡ ಸಿಐಡಿ ಬಂಧನದಿಂದ ತಪ್ಪಿಸಿಕೊಂಡಿದ್ದರು.
ಆದರೆ ಈ ಬಾರಿ ಶತಾಯ ಗತಾಯ ಅವರಿಗೆ ಬಲೆ ಹಾಕಲೇಬೇಕು ಎಂದು ಕಾದು ಕುಳಿತಿರುವ ಸಿಐಡಿ ಮತ್ತೆ ಎರಡನೇ ಬಾರಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಬೆಳಗ್ಗೆವರೆಗೆ ಕಾದು ವರದಿ ನೋಡಿದ ಬಳಿಕ ಮುಂದಿನ ಕ್ರಮಕ್ಕೆ ಸಜ್ಜಾಗಿದೆ.
ಮೆಹಬೂಬ್ ಅಲಿಯಾಸ್ ಅಶ್ಪಕ್ ದುಂಡಸಿ ಬಣ್ಣದ ಮಾತಿಗೆ ಮರಳಾಗಿ ಕೆ ಐ ಎ ಡಿ ಬಿ ಅಧಿಕಾರಿ ಶಂಕರ ತಳವಾರ ಎರಡನೇ ಬಾರಿಗೆ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಹಿತಿ ಇದ್ದರೂ ಸರಕಾರದ ಖಜಾನೆಗೆ ಕನ್ನ ಹಾಕುವ ದುರುದ್ದೇಶದಿಂದ ಹಣ ಹೊಡೆಯಲು ಸಹಕಾರ ನೀಡಿದ್ದ ಆರೋಪ ಎದುರಿಸುತ್ತಿದ್ದಾರೆ.
ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ ಒಂಬತ್ತು ಜನರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದು ಹತ್ತನೇ ಆರೋಪಿಯನ್ನು ಬಂಧಿಸಲು ಕ್ಷಣಗಣನೆ ಆರಂಭವಾಗಿದೆ.