*ಕೆ ಐ ಎ ಡಿ ಬಿ ಬಹುಕೋಟಿ ಹಗರಣ : ಪ್ರಕರಣದ ಮೂರನೇ ಆರೋಪಿ ಶಂಕರ ತಳವಾರನನ್ನು ಕೊನೆಗೂ ಬಂಧಿಸಿದ ಸಿಐಡಿ*
*ಬಂಧಿತರ ಸಂಖ್ಯೆ ಹತ್ತಕ್ಕೆ ಏರಿಕೆ*
*ಮೊದಲ ಬಾರಿಗೆ ಹೃದಯ ಸಂಬಂಧಿ ಕಾಯಿಲೆ ಹೆಸರು ಹೇಳಿ ತಪ್ಪಿಸಿಕೊಂಡಿದ್ದ ಕೆಐಎಡಿಬಿಯ ಭ್ರಷ್ಟ ಅಧಿಕಾರಿ*
*ಎರಡನೇ ಬಾರಿಗೆ ತಪಾಸಣೆ ವರದಿ ಬಂದ ಬಳಿಕ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ*
*ಧಾರವಾಡ ಕೇಂದ್ರ ಕಾರಾಗೃಹ ಸೇರಿದ ಹತ್ತನೇ ಆರೋಪಿ*
*ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಹೋರಾಟಕ್ಕೆ ಮತ್ತೊಂದು ಗರಿ*
ಧಾರವಾಡ ಪ್ರಜಾಕಿರಣ.ಕಾಮ್ : ಕೆ ಐ ಎ ಡಿ ಬಿ ಬಹುಕೋಟಿ ಹಗರಣದ ಕಿಂಗ್ ಪಿನ್ ಮೆಹಬೂಬ್ ಅಲಿಯಾಸ್
ಅಶ್ಫಕ್ ಅಲ್ಲಾಭಕ್ಷ ದುಂಡಸಿಯ ಬಂಧನದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳ ತಂಡ ಕೋಟಿ ಕೋಟಿ ಅಕ್ರಮ ಆಸ್ತಿ ಪಾಸ್ತಿ ಮಾಡಿದ್ದ ಕೆ ಐ ಎ ಡಿ ಬಿಯ ಭ್ರಷ್ಟ ಅಧಿಕಾರಿ ಶಂಕರ್ ತಳವಾರ ನನ್ನು ಬಂಧಿಸಿದೆ.
ನಿನ್ನೆ ತನ್ನ ಕಸ್ಟಡಿಗೆ ತೆಗೆದುಕೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಪಾಸಣೆಯ ವರದಿ ಬಂದ ಬಳಿಕ ಇಂದು ಎಲ್. ಆರ್. ಅಗ್ನಿ ನೇತೃತ್ವದ
ಸಿಐಡಿ ಅಧಿಕಾರಿಗಳ ತಂಡ ನ್ಯಾಯಾಲಯದ ಮುಂದೆ ಶಂಕರ ತಳವಾರ ಅವರನ್ನು ಹಾಜರುಪಡಿಸಿದೆ.
ಇತ ಈ ಮೊದಲು ಕೂಡ ಹೃದಯ ಸಂಬಂಧಿ ಕಾಯಿಲೆ ಇರುವ ಹಿನ್ನೆಲೆಯಲ್ಲಿ ಸಿಐಡಿ ಬಂಧನದಿಂದ ತಪ್ಪಿಸಿಕೊಂಡಿದ್ದ.
ಆದರೆ ಈ ಬಾರಿ ಶತಾಯ ಗತಾಯ ಬಲೆ ಹಾಕಲೇಬೇಕು ಎಂದು ಕಾದು ಕುಳಿತ್ತಿದ್ದ ಸಿಐಡಿ ಮತ್ತೆ ಎರಡನೇ ಬಾರಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಬೆಳಗ್ಗೆವರೆಗೆ ಕಾದು ವರದಿ ನೋಡಿದ ಬಳಿಕ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮೆಹಬೂಬ್ ಅಲಿಯಾಸ್ ಅಶ್ಪಕ್ ದುಂಡಸಿಯ ಬಣ್ಣದ ಮಾತಿಗೆ ಮರಳಾಗಿ ಕೆ ಐ ಎ ಡಿ ಬಿ ಅಧಿಕಾರಿಗಳಾದ ವಿ.ಡಿ. ಸಜ್ಜನ, ಶಂಕರ ತಳವಾರ ಹಾಗೂ ಇತರ ಹದಿಮೂರು ಜನ ಆರೋಪಿಗಳು ಎರಡನೇ ಬಾರಿಗೆ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಖಜಾನೆಗೆ ಕೋಟಿ ಕೋಟಿ ಕನ್ನ ಹಾಕಿದ್ದರು.
ಈ ಬಗ್ಗೆ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಹೋರಾಟ ನಡೆಸಿ ಅಂದಿನ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು.
ಆನಂತರ ಎಚ್ಚೆತ್ತ ಸರಕಾರ ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಲು ಸೂಚಿಸಿದ್ದರ ಪರಿಣಾಮ ಇಂದು ಸಾಲು ಸಾಲು ಆರೋಪಿಗಳು ಜೈಲು ಪಾಲಾದ ಪರಿಣಾಮ ಮತ್ತೊಂದು ಗರಿ ಮೂಡಿದಂತಾಗಿದೆ.
ಸರ್ಕಾರದ ಹಣ ಹೊಡೆಯಲು ಸಹಕಾರ ನೀಡಿದ್ದ ಆರೋಪದ ಮೇಲೆ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.
ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ ಒಂಬತ್ತು ಜನರನ್ನು ಬಂಧಿಸಿ ಜೈಲಿಗೆ ಅಟ್ಟಿತ್ತು.
ಈಗ ಹತ್ತನೇ ಆರೋಪಿಯಾಗಿ ಬಂಧಿತವಾಗಿರುವ ಶಂಕರ ತಳವಾರ ಪ್ರಕರಣದ ಮೂರನೇ ಆರೋಪಿಯಾಗಿರುವುದು ಇಲ್ಲಿ ಸ್ಮರಿಸಬಹುದು.