ಧಾರವಾಡ prajakiran.com : ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇನ್ನು ಹಲವು ತಿಂಗಳು ಬಾಕಿಯಿರುವಾಗಲೇ ಅಖಾಡ ರಂಗೇರ ತೊಡಗಿದೆ.
ಈಗಿನ ವಿಧಾನ ಪರಿಷತ್ ಸಭಾಪತಿ ಆಗಿರುವ ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಅವಧಿ ಪೂರ್ಣಗೊಳ್ಳಲು ಬರುತ್ತಿದೆ.
ಹೀಗಾಗಿ ಅವರ ವಿರುದ್ದ ಕಾಂಗ್ರೆಸ್ ಪಕ್ಷ ಧಾರವಾಡ ಜಿಲ್ಲೆಯ ಪ್ರಭಾವಿ ಸರಕಾರಿ ಶಾಲಾ ಶಿಕ್ಷಕರಾಗಿ ಕೆಲಸ ನಿರ್ವಹಿಸಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಶಿಕ್ಷಕರ ಸಂಘಟನೆಯ ರೂವಾರಿಯಾಗಿ ಕೆಲಸ ನಿರ್ವಹಿಸಿರುವ ಬಸವರಾಜ ಗುರಿಕಾರ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಹೆಸರು ಪ್ರಕಟಿಸಿದೆ.
ಹೀಗಾಗಿ ಈ ಬಾರಿ ಶಿಕ್ಷಕರ ಕ್ಷೇತ್ರದ ಚುನಾವಣಾ ಅಖಾಡ ಇನ್ನಷ್ಟು ರಂಗೇರಲಿದೆ. ಈ ಬಾರಿ ಬಸವರಾಜ ಹೊರಟ್ಟಿ ಅವರಿಗೆ ಸೋಲಿನ ರುಚಿ ತೋರಿಸಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ ಅವರನ್ನು ಕಣಕ್ಕೆ ಇಳಿಸಿದೆ
ಬಿಜೆಪಿಯ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಕಾಂಗ್ರೆಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆಯಾದ ಬಳಿಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಇನ್ನಷ್ಟು ಕಾವು ಪಡೆಯಲಿದೆ.
ಈಗಾಗಲೇ ಬಸವರಾಜ ಗುರಿಕಾರ ಅವರು ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಶಿಕ್ಷಕರ ಜೊತೆಗೆ ನಿರಂತರವಾಗಿ ಸಂಪರ್ಕ, ಒಡನಾಟವನ್ನು ಹೊಂದಿರುವುದು ಇಲ್ಲಿ ಸ್ಮರಿಸಬಹುದು