ಧಾರವಾಡ ಪ್ರಜಾಕಿರಣ.ಕಾಮ್ : ಮಹಾನಗರ ಪಾಲಿಕೆ ಮತ್ತು ಎಲ್. ಆಂಡ್ ಟಿ ಕಂಪನಿಯ ಧೋರಣೆ ಖಂಡಿಸಿ ಜನಜಾಗೃತಿ ಸಂಘದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದೀಪಕ ಚಿಂಚೋರೆ ಹೇಳಿದ್ದಾರೆ.
ನೀರು ಸರಬರಾಜು ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರ ಹಿತದೃಷ್ಠಿಯಿಂದ ತಾವು ಕೂಡ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ನೀರು ಸರಬರಾಜು ಕರ್ತವ್ಯದಲ್ಲಿದ್ದ ಕಾರ್ಮಿಕರ ಮರು ನೇಮಕ ಮತ್ತು ಬಾಕಿಯಿರುವ ವೇತನ ಬಿಡುಗಡೆಗೆ ಆಗ್ರಹಿಸಿ ಈಗ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ನ್ಯಾಯಸಮ್ಮತವಾಗಿದೆ.
ಕಾರ್ಮಿಕರು ಗಂಭೀರ ಸ್ವರೂಪದಲ್ಲಿ ಹೋರಾಟ ನಡೆಸುತ್ತಿದ್ದರೂ ಪಾಲಿಕೆಯಾಗಲಿ ಅಥವಾ ಸರಕಾರವಾಗಲಿ ಸ್ಪಂದಿಸಿ, ಬೇಡಿಕೆ ಈಡೇರಿಸಲು ಆಸಕ್ತಿ ತೋರಿಸದಿರುವುದು ಖಂಡನೀಯ.
ಕಾರ್ಮಿಕರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಈ ಹಿನ್ನೆಲೆಯಲ್ಲಿ ನಾಳೆ ದಿ.6 ರಂದು ತಾವು ಕೂಡ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಚಿಂಚೋರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.