ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರವೂ ಹಿರಿಯ ಪೊಲೀಸ್ ಅಧಿಕಾರಿಯ ವಿಚಾರಣೆ ನಡೆಸಿದರು.
ಅಂದು ಹುಬ್ಬಳ್ಳಿ ಧಾರವಾಡ ಡಿಸಿಪಿಯಾಗಿದ್ದ ಹಾಗೂ ಸದ್ಯ ರಾಮನಗರ ಪೊಲೀಸ್ ತರಬೇತಿ ಶಾಲೆ ಮುಖ್ಯಸ್ಥರಾಗಿರುವ ಜಿನೇಂದ್ರ ಖಣಗಾವಿಅವರನ್ನು ವಿಚಾರಣೆ ನಡೆಸಿದರು.
ಅವರು ಯೋಗೀಶಗೌಡ ಗೌಡರ ಕೊಲೆಯಾದ ದಿನದಂದು 2016ರ ಜೂನ್ 15ರಂದು ಹುಬ್ಬಳ್ಳಿ ಧಾರವಾಡ ಡಿಸಿಪಿಯಾಗಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಬೆಳಗ್ಗೆಯಿಂದ ತೀವ್ರ ವಿಚಾರಣೆ ನಡೆಸಿದರು ಎಂದು ಗೊತ್ತಾಗಿದೆ.
ಇದೇ ವೇಳೆ ಸಿಬಿಐ ಅಧಿಕಾರಿಗಳು ಬಸವರಾಜ ಮುತ್ತಗಿಯನ್ನು ಕೂಡ ತೀವ್ರ ವಿಚಾರಣೆ ನಡೆಸಿ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದರು ಎಂದು ತಿಳಿದುಬಂದಿದೆ.
ಈ ಹಿಂದೆ ಯೋಗೇಶ್ ಗೌಡ ಗೌಡರ ಕೊಲೆಯಾದಾಗ ಹುಬ್ಬಳ್ಳಿ ಧಾರವಾಡ ಪೊಲೀಸರು ಕೊಲೆ ಆರೋಪದ ಮೇಲೆ ಬಸವರಾಜ ಮುತ್ತಗಿಯನ್ನು ಬಂಧಿಸಿದ್ದರು.
ಹೀಗಾಗಿ ಇವರನ್ನು ಯಾವ ಆಧಾರದ ಮೇಲೆ ಪೊಲೀಸರು ಬಂಧಿಸಿದರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಸಿಬಿಐ ಅಧಿಕಾರಿಗಳು ಕೊಲೆಗೆ ಸುಪಾರಿ ಪಡೆದ ರಾಮನಗರ, ಮಂಡ್ಯ, ಕೊಡಗು, ಬೆಂಗಳೂರು ಹಾಗೂ ಧಾರವಾಡ ಸೇರಿ ವಿವಿಧ ಜಿಲ್ಲೆಯ 8 ಆರೋಪಿಗಳನ್ನು ಬಂಧಿಸಿದ್ದು, ಒಬ್ಬ ಮಾತ್ರ ಜಾಮೀನು ಮೇಲೆ ಹೊರಗಡೆಯಿದ್ದಾನೆ.
ಈ ನಿಟ್ಟಿನಲ್ಲಿ ಸಿಬಿಐ ಅಧಿಕಾರಿಗಳು ತಮ್ಮ ತನಿಖೆ ಚುರುಕು ಗೊಳಿಸಿದ್ದು, ಪೊಲೀಸರು ಬಂಧಿಸಿರುವ ಆರೋಪಿಗಳಿಗೂ, ಸಿಬಿಐ ಬಂಧಿಸಿರುವ ಆರೋಪಿಗಳಿಗೂ ಯಾವುದೇ ಸಾಮ್ಯತೆ ಕಾಣದ ಹಿನ್ನಲೆಯಲ್ಲಿ ಅಂದು ಹುಬ್ಬಳ್ಳಿ ಧಾರವಾಡದಲ್ಲಿ ಕಾರ್ಯ ನಿರ್ವಹಿಸಿದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಿಬಿಐಅಧಿಕಾರಿಗಳು ಪದೇ ಪದೇ ವಿಚಾರಣೆ ನಡೆಸುತ್ತಿರುವುದು ತೀವ್ರ ಕೂತುಹಲ ಕೆರಳಿಸಿದೆ.