ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತನಿಖೆ ಶುಕ್ರವಾರವೂ ಮುಂದುವರೆಯಿತು.
ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಮಾಜಿ ಸಚಿವ ವಿನಯ ಸೋದರ ಸಂಬಂಧಿಯೂ ಆಗಿರುವ ಧಾರವಾಡ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಪತಿ ಕೆಂಪೇಗೌಡ ಪಾಟೀಲ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ, ಬಸವರಾಜ ಮುತ್ತಗಿ ಸೇರಿದಂತೆ ಹಲವರ
ವಿಚಾರಣೆ ನಡೆಸಿ, ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದರು.
ಬಳಿಕ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ ಸುದ್ದಿಗಾರರೊಂದಿಗೆ ಮಾತನಾಡಿ,
ಜಿಲ್ಲಾ ಪಂಚಾಯತ ಸಭೆಯಲ್ಲಿ ನಡೆದಿದ್ದ ಗಲಾಟೆ ಬಗ್ಗೆ ಸಿಬಿಐ ವಿಚಾರಣೆ ನಡೆಸಿದೆ.
ಯೋಗೇಶಗೌಡ ಮತ್ತು ವಿನಯ್ ಕುಲಕರ್ಣಿ ನಡುವೆ ನಡೆದಿದ್ದ ಗಲಾಟೆ ಇದಾಗಿದ್ದು,
ನಾನು ಅಂದಿನ ಕೆಡಿಪಿ ಸಭೆಯಲ್ಲಿ ಇರಲಿಲ್ಲ.
ಆದ್ರೆ ಜಿಪಂ ಸಾಮಾನ್ಯ ಸಭೆಯಲ್ಲಿ ಇದ್ದೆ.
ಅದರ ಮಾಹಿತಿಯನ್ನು ಸಿಬಿಐ ಅಧಿಕಾರಿಗಳಿಗೆ ಕೊಟ್ಟಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಆ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮೀಣ ನೀರು ಸರಬರಾಜು ಇಲಾಖೆಯ
ಎಇಇ ಎಸ್ಎನ್ ಗೌಡರ ಅವರ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದರು ಎಂದು ತಿಳಿದು ಬಂದಿದೆ .
ನಿನ್ನೇ ಕೂಡ ಸಿಬಿಐ ಅಧಿಕಾರಿಗಳು ಪ್ರಶಾಂತ್ ಕೇಕರೆ ಹಾಗೂ ಬಸವರಾಜ ಮುತ್ತಗಿ ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.