ಬೆಂಗಳೂರು prajakiran.com : ಜೈಲಿನಲ್ಲಿದ್ರೂ ಕ್ಯಾಟ್ ರಾಜನ ಉಪಟಳ ನಿಲ್ಲದಿರುವುದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕ್ಯಾಟ್ ರಾಜ ರೌಡಿಶೀಟರ್ ಲಕ್ಷ್ಮಣನ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆತ ಜೈಲಿನಲ್ಲಿದ್ದುಕೊಂಡೇ ಜಾಮೀನಿಗಾಗಿ ಸ್ವಂತ ಭಾವನ ಕೊಲೆಗೆ ಸುಪಾರಿ ನೀಡಿದ್ದಾನೆ.
ತನ್ನ ಶಿಷ್ಯಂದಿರ ಮೂಲಕ ಪತ್ನಿಯ ತಮ್ಮನ ಕೊಲೆಗೆ ಯತ್ನ ನಡೆಸಿರುವುದು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ.
ಹಾಡಹಗಲೇ ಸಂದೀಪ್ ರೆಡ್ಡಿ ಎಂಬಾತನ ಕೊಲೆಗೆ ಯತ್ನ ಮಾಡಿದ ಹಿನ್ನಲೆಯಲ್ಲಿ ಯಲಹಂಕ ಠಾಣಾ ಪೊಲೀಸರಿಂದ ಹತ್ಯೆಗೆ ಯತ್ನಿಸಿದ ಐವರು ಅರೋಪಿಗಳ ಹೆಡೆಮುರಿ ಕಟ್ಟಲಾಗಿದೆ.
ಕ್ಯಾಟ್ ರಾಜನ ಪತ್ನಿ ಸುಮಲತಾ, ಶಿಷ್ಯಂದಿರಾದ ಮಂಜು, ಗೌತಮ್, ವಿನಯ್ ನಾಯಕ್ ಹಾಗೂ ಮೌಲಾ ಅಲಿ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ.
ಈಗಾಗಲೇ ರೌಡಿ ಲಕ್ಷ್ಮಣನ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕ್ಯಾಟ್ ರಾಜಅಲ್ಲಿಂದಲೇ ಸ್ಕೈಚ್ ಹಾಕಿರುವುದು ಪೊಲೀಸರ ನಿದ್ದೆಗೆಡಿಸಿದೆ.
ಗಂಡನ ಬಿಡುಗಡೆಗಾಗಿ ತಮ್ಮನ ಬಳಿ ಜಮೀನು ಮಾರಿ ಹಣ ಕೊಡುವಂತೆ ಸುಮಲತಾ ಕೇಳಿದ್ದರು. ಆದರೆ ಹಣ ನೀಡಲು ಸಂದೀಪ್ ರೆಡ್ಡಿ ಒಪ್ಪದಿದ್ದಾಗ ಶಿಷ್ಯಂದಿರ ಮೂಲಕ ಹತ್ಯೆಗೆ ಸಂಚು ರೂಪಿಸಿದ್ದ.
ಇದರಿಂದಾಗಿ ಮನನೊಂದ ಸಂದೀಪ್ ರೆಡ್ಡಿ ಸಹೋದರಿಯಿಂದ ದೂರ ಉಳಿದು ಬಾಡಿಗೆ ಮನೆಯಲ್ಲಿ ವಾಸವಿದ್ದ.
ಮೇ 29ರಂದು ಹಾಡಹಗಲೇ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಸಂದೀಪ್ ರೆಡ್ಡಿ ಮೇಲೆ ಈ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದರು.
ಈ ಕುರಿತು ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಸಂದೀಪ್ ರೆಡ್ಡಿ ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ.