ಬೆಂಗಳೂರು prajakiran.com : ಚೈನಾದಲ್ಲಿರುವ ಈವರೆಗೆ ಭಾರತದಲ್ಲಿ ಹೂಡಿಕೆ ಮಾಡದೇ ಇರುವಂತಹ ಕಂಪನಿಗಳನ್ನು ಪಟ್ಟಿ ಮಾಡಿ ಅವುಗಳನ್ನು ಸಂಪರ್ಕಿಸಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಹೇಳಿದರು.
ಅವರು ಬುಧವಾರ ವಿಧಾನಸೌಧದಲ್ಲಿ ಸ್ಪೆಷಲ್ ಇನ್ವೆಸ್ಟ್ಮೆಂಟ್ ಟಾಸ್ಕ್ ಫೋರ್ಸ್ ಸಭೆ ನಡೆಸಿ ಈ ಸೂಚನೆ ನೀಡಿದರು.
ರಾಜ್ಯ ಸರಕಾರ ಕರೋನಾ ಮಹಾಮಾರಿಯ ಸಂಧರ್ಭವನ್ನು ನಿರ್ವಹಿಸಿದ ರೀತಿಯನ್ನು ಗಮನಿಸಿದಲ್ಲಿ ರಾಜ್ಯ ಸರಕಾರದ ಆಡಳಿತ ಯಂತ್ರದ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.
ನಮ್ಮ ರಾಜ್ಯದಲ್ಲಿ ಹೂಡಿಕೆಗೆ ಉತ್ತಮ ಪರಿಸರವಿದೆ. ಕೈಗಾರಿಕಾ ಸ್ಥಾಪನೆಗೆ ಅಗತ್ಯವಾಗಿರುವ ಭೂಮಿ ಹಾಗೂ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ ವಿಫಲವಾಗಿವೆ.
ಅಲ್ಲದೆ, ರಾಜ್ಯ ಸರಕಾರ ಈಗಾಗಲೇ ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ.
ಯಾವುದೇ ಪರವಾನಗಿಯನ್ನು ಪಡೆಯದೆ ಉದ್ಯಮ ಸ್ಥಾಪಿಸಿ ಮೂರು ವರ್ಷಗಳ ನಂತರ ಅಗತ್ಯ ಪರವಾನಗಿಗಳನ್ನು ಪಡೆಯುಲು ಅವಕಾಶ ಮಾಡಿ ಕೊಡುವ ಹೊಸ ಕಾಯ್ದೆಯನ್ನು ಜಾರಿಗೊಳಿಸಲು ಕ್ರಮವಹಿಸಲಾಗಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ತಿಳಿಸಿದರು.
ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆ ಮಾಡಬಹುದಾದ ಕೈಗಾರಿಕೆಗಳ ಪಟ್ಟಿಯನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಈಗಾಗಲೇ ನಿರ್ಧರಿಸಿದಂತೆ ಟಾಪ್ ೧೦೦ ಕಂಪನಿಗಳನ್ನು ಪಟ್ಟಿ ಮಾಡಿ ರಾಜ್ಯ ಸರಕಾರದ ವತಿಯಿಂದ ಸಂಪರ್ಕ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಡಾ ಈ ವಿ ರಮಣರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಜಪಾನ್ ಎಕ್ಟ್ರನಲ್ ಟ್ರೇಡ್ ಆರ್ಗನೈಸೇನ್ನ ಡೈರೆಕ್ಟರ್ ಜನರಲ್ ತಾಕಾಶಿ ಸುಜುಕಿ, ಕೊರಿಯಾ ಟ್ರೇಡ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಏಜೆನ್ಸಿಯ ಡೈರೆಕ್ಟರ್ ಜನರಲ್ ಪಾರ್ಕ್ ಕೆನ್ಹೂಂಗ್, ಅಮೇರಿಕನ್ ಛೆಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾದ ಸಂಜಯ್ ಕೌಲ್, ಇಂಡೋಫ್ರೆಂಚ್ ಛೆಂಬರ್ ಆಫ್ ಕಾಮರ್ಸಿನ ಡೈರೆಕ್ಟರ್ ಜನರಲ್ ಪಾಯಲ್ ಕನ್ವರ್ ಸೇರಿದಂತೆ ಜಪಾನ್, ಕೊರಿಯಾ, ಟೈವಾನ್, ಸಿಂಗಾಪೂರ್, ಯುಎಸ್, ಫ್ರಾನ್ಸ್, ಜರ್ಮನಿ ಹಾಗೂ ಟಾಸ್ಕ್ ಫೋರ್ಸ್ನ ಸದಸ್ಯರುಗಳು ಹಲವಾರು ಸಲಹೆಗಳನ್ನು ನೀಡಿದರು.