ಬೆಳಗಾವಿ prajakiran.com : ಊಟ ಮುಗಿಸಿ ವಾಯು ವಿಹಾರಕ್ಕೆ ತೆರಳಿದ್ದ ಇಬ್ಬರು ಮಹಿಳೆಯರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಮೃತ ಮಹಿಳೆಯರನ್ನು ಸವಿತಾ ಪಾಟೀಲ್ (45), ವಿದ್ಯಾ ಪಾಟೀಲ್ (47) ಎಂದು ಗುರುತಿಸಲಾಗಿದೆ. ಶಾಂತಾ ಕೃಷ್ಣ ಚೌಗುಲೆ (55) ಗಾಯಾಳು ಎಂದು ಗುರುತಿಸಲಾಗಿದೆ.
ಮೇ 24ರಂದು ಭಾನುವಾರ ರಾತ್ರಿ 11.30 ಕ್ಕೆ ಮುತಗಾ ಸಮೀಪ ಈ ಅಪಘಾತ ನಡೆದಿದ್ದು, ಬಿಜೆಪಿ ಯುವ ಮೋರ್ಚಾ ಮುಖಂಡ ಯುವರಾಜ ಜಾಧವ ಅವರೇ ಸ್ವತಃ ಕಾರು ಚಾಲನೆ ಮಾಡಿ ಈ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ನಿಯಂತ್ರಣ ತಪ್ಪಿದ್ದರಿಂದ ಹಿಂಬದಿಯಿಂದ ತೆರಳುತ್ತಿದ್ದ 3 ಮಹಿಳೆಯರಿಗೆ ಕಾರು ಹಾಯಿಸಿದ್ದಾರೆ. ಹೀಗಾಗಿ ಈ ದುರಂತದಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಒಬ್ಬ ಮಹಿಳೆ ಗಾಯಗೊಂಡಿದ್ದಾರೆ.
ಅವರನ್ನು ಆಸ್ಪತ್ರೆದೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಆರೋಪಿ ಬಿಜೆಪಿ ಮುಖಂಡ ಯುವರಾಜ್ ಜಾಧವ್ ನನ್ನು ಬಂಧಿಸಿದ್ದಾರೆ.
ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ ಸಿನ್ನೂರ ತನಿಖೆ ನಡೆಸುತ್ತಿದ್ದಾರೆ.